ಕೆಲವು ಪ್ರತ್ಯೇಕವಾದಿ ಮನಸುಗಳು ಭಾಷಣ ಮಾಡುವ ನೆಪದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಒಂದು ವರ್ಗ ಪಂಗಡಕಕ್ಕೆ ಸೀಮಿತ ಗೊಳಿಸುತ್ತಿರುವುದು ದುರದೃಷ್ಟಕರ ಎಂದು ಮೂಡಿಗೆರೆ ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಸಚಿನ್ ಬಾನಳ್ಳಿ ಖಂಡಿಸಿದ್ದಾರೆ.
ಅವರು ಹೇಳಿಕೆಯಲ್ಲಿ ತಿಳಿಸಿ ಕಳೆದ ವಾರ ಭೀಮ ಕೋರೆಗಾವ್ ವಿಜಯೋತ್ಸವವನ್ನು ಮೂಡಿಗೆರೆಯಲ್ಲಿ ಎಲ್ಲಾ ಜನಾಂಗ ಮತ್ತು ಪಕ್ಷದ ಪ್ರಮುಖರು ಸೇರಿಕೊಂಡು ವಿಜೃಂಭಣೆಯಿಂದ ಆಚರಿಸಲಾಗಿತ್ತು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು.
ಇದರ ಮಧ್ಯೆ ಅಂಬೇಡ್ಕರ್ ದ್ಯೇಯ ಸಿದ್ಧಾಂತ, ಭೀಮಾ ಕೋರೆಗಾವ್ ಯುದ್ಧದ ಇತಿಹಾಸ ಮತ್ತು ದೇಶದ ಜನತೆಗೆ ಬಾಬಾಸಾಹೇಬರು ನೀಡಿದ ಕೊಡುಗೆಯನ್ನು ವಿಶ್ವಕ್ಕೆ ಸಾರಬೇಕಾದ ಹಾಗೂ ದಿನವು ಇವರ ಮಾನವೀಯ ಮೌಲ್ಯವನ್ನು ಹೆಚ್ಚಿಸಬೇಕಾದ ಈ ದಿನಗಳಲ್ಲಿ ಅಂದಿನ ಕಾರ್ಯಕ್ರಮದ ಮುಖ್ಯ ಭಾಷಣಕಾರರು ಸಮಾಜವನ್ನು ಒಡೆಯುವ ಮನಸ್ಥಿತಿಯ ಭಾಷಣವನ್ನು ಮಾಡಿರುತ್ತಾರೆ. ವೇದಿಕೆಯನ್ನು ಬಿಜೆಪಿ ಮತ್ತು ಸಂಘ ಪರಿವಾರ ಮತ್ತು ಕೆಲವು ಜಾತಿ ಸಮಾಜದವರನ್ನು ದೋಷಿಸುವುದಕ್ಕೆ ಬಳಸಿಕೊಂಡಿದ್ದು ನಾಚಿಕೆಗೇಡು. ಇದು ಭಾರತರತ್ನಗೆ ಮಾಡಿದ ಅವಮಾನ.
ಭಾರತೀಯರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಯಾವುದೇ ಜಾತಿ ಮತ ಭೇದವಿಲ್ಲದೆ ಗೌರವ ನೀಡುತ್ತಿದ್ದು. ಇದೆಲ್ಲವನ್ನು ಗೊತ್ತಿದ್ದರು ಸಮಾಜ ಒಡೆಯುವ ಕಾರ್ಖಾನೆಯಲ್ಲಿ ಪಳಗಿಕೊಂಡು, ಇನ್ನೊಬ್ಬರ ಸಿದ್ದಾಂತದ ಅಳ ತಿಳಿಯದೆ ಪ್ರಶಸ್ತಿ ಅಧಿಕಾರದ ಆಸೆಗೆ ಮಲೆನಾಡಿನ ಒಗ್ಗಟ್ಟನ್ನು ಒಡೆಯುವ ಮಾತುಗಳನ್ನು ಆಡಿದ್ದಾರೆ ಜೊತೆಗೆ ಇವರಿಗೆ ಕುಮ್ಮಕ್ಕು ಕೊಡುವ ಮನಸ್ಥಿತಿಯವರು ಜೈಕಾರ ಹಾಕಿದ್ದಾರೆ.
ದೇಶದಲ್ಲಿ ಬಾಬಾ ಸಾಹೇಬರ ಹೆಸರು ಮತ್ತು ಭೀಮಾ ಕೋರಂಗಾವ್ ಕಾರ್ಯಕ್ರಮ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಅನಿಷ್ಠಗಳನ್ನು ಖಂಡಿಸುವ ಕಾರ್ಯವಾಗಬೇಕೆ ಹೊರತು ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಕೆಲಸ ಬೇಡ ಎಂದು ತಿಳಿಸಿದ್ದಾರೆ.



