ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದ ದಾಸರಹಳ್ಳಿ ಬಳಿ ನಡೆದಿದೆ. ಬಣಕಲ್ ನ ಶಾಂತಿನಗರ ನಿವಾಸಿ ಗುತ್ತಿಗೆದಾರ ಸೈಯದ್ ಆಲಿ (ಮೋಣು) ಮೃತ ದುರ್ದೈವಿ.
ಮಾರುತಿ 800ಕಾರಿನಲ್ಲಿ ಕಟ್ಟಡದ ಕೆಲಸಕ್ಕೆಂದು ಬಣಕಲ್ ಸಮೀಪದ ಬಸನಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ ವಾಪಾಸ್ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದೆ. ಮಂಗಳವಾರ ಸಂಜೆ 5:45ರ ಸಮಯದಲ್ಲಿ ದಾಸರಹಳ್ಳಿ ಸಮೀಪ ಕಾರಿನ ನಿಯಂತ್ರಣ ತಪ್ಪಿ ಕಾರು ಬಲ ಮಗ್ಗಲು ಆಗಿ ಮುಗುಚಿ ಬಿದ್ದಿದೆ. ಪರಿಣಾಮ ಸಯ್ಯದ್ ಆಲಿರವರ ತಲೆ ಹಾಗೂ ಮುಖದ ಭಾಗದಲ್ಲಿ ಪೆಟ್ಟು ಬಿದ್ದಿದೆ. ತಕ್ಷಣಕ್ಕೆ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಪಾಸಣೆ ನಡೆಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಅವರ ನಿಧನ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸೈಯದ್ ಆಲಿಯವರು ಅವರು ಉತ್ತಮ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿದ್ದು. ಈ ಭಾಗದಲ್ಲಿ ಜನಾನುರಾಗಿಯಾಗಿದ್ದರು. ಬಣಕಲ್ ಜನತೆ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮೃತರು ತಂದೆ,ತಾಯಿ, ಮಡದಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಘಟನೆ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



