ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಸಂತ್ರಸ್ತರಾದವರ ನೆರವಿಗೆ ಧಾವಿಸಿದ್ದು, ಅವಶ್ಯಕ ವಸ್ತುಗಳನ್ನು ವಿತರಿಸುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ಛೇರ್ಮನ್ ಪ್ರದೀಪ್ ಗೌಡ ತಿಳಿಸಿದರು.
ಬುಧವಾರ ನಗರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸಂತ್ರಸ್ಥರಿಗೆ ತಲುಪಿಸಲು ಪರಿಕರಗಳನ್ನು ಹಸ್ತಾಂತರಿಸಿ ನಂತರ ಮಾತನಾಡಿದ ಅವರು, ರಾಜ್ಯ ಘಟಕದಿಂದ ಉತ್ತಮ ಗುಣಮಟ್ಟದ ಟಾರ್ಪಲ್ಗಳು, ಸ್ಯಾನಿಟರಿ ಪ್ಯಾಡ್ಗಳು, ಕೊಬ್ಬರಿ ಎಣ್ಣೆ, ಸೋಪು ಇನ್ನಿತರೆ ವಸ್ತುಗಳನ್ನು ಪೂರೈಸಿದೆ. ಅವುಗಳನ್ನು ಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ಥರಾದವರಿಗೆ ಕಳಿಸಿಕೊಡಲಾಗುತ್ತಿದೆ ಎಂದರು.
ಇದೇ ವೇಳೆ ಡೆಂಗ್ಯೂ ಜ್ವರ ಸಹ ಹೆಚ್ಚಿರುವುದರಿಂದ ಸೊಳ್ಳೆ ಬತ್ತಿಗಳು, ಸೊಳ್ಳೆ ಪರದೆಗಳು, ದಿನ ಬಳಕೆ ವಸ್ತುಗಳನ್ನು ಕಳೆದುಕೊಂಡಿರುವವರಿಗೆ ಅತ್ಯವಶ್ಯಕವಾಗಿ ಬೇಕಿರುವ ಪಾತ್ರೆಗಳ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದರು.
ಆಯಾ ತಾಲ್ಲೂಕುಗಳಲ್ಲಿ ಸಂಸ್ಥೆಯ ಸ್ಥಳೀಯ ನಿರ್ದೇಶಕರುಗಳು ಸಂತ್ರಸ್ಥರನ್ನು ಗುರುತಿಸಿ ಈ ಪರಿಕರಗಳನ್ನು ತಲುಪಿಸಲಿದ್ದಾರೆ. ಸಧ್ಯಕ್ಕೆ ೨೫ ಕಿಚನ್ ಸೆಟ್ಗಳು, ತಲಾ 100 ಸೊಳ್ಳೆ ಪರದೆಗಳು, ಸೊಳ್ಳೆ ಬತ್ತಿಗಳು, ಹೈಜಿನ್ ಕಿಟ್ಗಳು ಬಂದಿವೆ. ಇಷ್ಟನ್ನೂ ಸಂತ್ರಸ್ತರ ಅಗತ್ಯಕ್ಕೆ ತಕ್ಕಂತೆ ಕಳಿಸಿಕೊಲಾಗುತ್ತಿದೆ ಎಂದು ತಿಳಿಸಿದರು.
ಸಂತ್ರಸ್ಥರಿಗೆ ತಲುಪಿಸಿದ ಬಗ್ಗೆ ಸೂಕ್ತ ದಾಖಲೆಗಳನ್ನು ರಾಜ್ಯ ಘಟಕಕ್ಕೆ ಕಳಿಸಿಕೊಡಲಾಗುವುದು. ನಂತರ ಇನ್ನಷ್ಟು ನೆರವು ಲಭ್ಯವಾಗಲಿದೆ. ಈಗಾಗಲೇ ಮೂಡಿಗೆರೆ ಭಾಗಕ್ಕೆ ಕಳಿಸಲಾಗಿದೆ. ಮಾಕೋಡು, ಬ್ಯಾರವಳ್ಳಿಗೆ ಇಂದು ಕಳಿಸಲಾಗುತ್ತಿದೆ. ತರೀಕೆರೆ ಭಾಗಕ್ಕೆ ನಾಳೆ ಕಳಿಸಲಿದ್ದೇವೆ ಎಂದರು.
ಜಿಲ್ಲಾ ಘಟಕದಲ್ಲಿ ಕಾರ್ಯದರ್ಶಿ ರಸೂಲ್ ಖಾನ್, ಉಪ ಛೇರ್ಮನ್ ಆಗಿ ಪವನ್ ಡಿ.ಶೆಟ್ಟಿ, ನಿರ್ದೇಶಕರುಗಳಾದ ವಿಲಿಯಂ ಪೆರೆರಾ, ಡಾ. ಸುಂದರಗೌಡ, ಜೆ.ವಿನಾಯಕ್, ಚಂದನ್ ಕುಮಾರ್ ಇತರರು ಇದ್ದಾರೆ ಎಂದರು.



