ವಕೀಲ ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ತುಮಕೂರು ನಗರ ಪೋಲೀಸ್ ವೃತ್ತ ನಿರೀಕ್ಷಕರ ವಿರುದ್ದ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೂಡಿಗೆರೆ ವಕೀಲರ ಸಂಘದಿಂದ ಶಿರಸ್ತೇದಾರ್ ಎಂ.ಬಿ.ರಘು ಅವರ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್ ಮಾತನಾಡಿ ಅಮಾಯಕ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯದ ಎಲ್ಲೆ ಮಿತಿಮೀರಿದೆ.ಇಂತಹ ಗೊಂಡಾಗಿರಿಯನ್ನು ವಕೀಲರ ಸಂಘ ಸಹಿಸುವುದಿಲ್ಲ. ತುಮಕೂರಿನ ವಕೀಲ ರವಿಕುಮಾರ್ ಅವರು ಮಾಡಿದ ತಪ್ಪಾದರು ಏನು? ಅವರನ್ನು ಪೋಲೀಸ್ ವೃತ್ತ ನಿರೀಕ್ಷಕರು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಅಲ್ಲದೆ ಅವರ ಮೇಲೆ ಹಲ್ಲೆಯನ್ನು ಸಹಾ ಮಾಡಿರುವುದು ಏಕೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ವಿನಾಕಾರಣ ವಕೀಲರ ಮೇಲೆ ಹಲ್ಲೆ ನಡೆಸಿರುವ ಪೋಲೀಸ್ ಅಧಿಕಾರಿಯ ವಿರುದ್ದ ಗೃಹ ಸಚಿವರು ಸೂಕ್ತ ರೀತಿಯಲ್ಲಿ ಕಾನೂನು ಕ್ರಮಕೈಗೊಳ್ಳಬೇಕು.ತಪ್ಪಿದಲ್ಲಿ ವಕೀಲರ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲರ ಸಂಘದ ಪದಾಧಿಕಾರಿಗಳಾದ ಕೆ.ಸಿ.ಚಂದ್ರಶೇಖರ್, ರಿಜ್ವಾನ್ಅಲಿ, ಬಿ.ಎಸ್.ಸುರೇಶ್, ಪ್ರತಾಪ್ ಮತ್ತಿತರಿದ್ದರು.


