ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದೊಂದಿಗೆ ಒಂದು ಭೂಮಿ ಒಂದು ಆರೋಗ್ಯ ಎಂಬ ಘೋಷವಾಕ್ಯದ ಮೂಲಕ ಯೋಗ ಶಿಕ್ಷಣ, ಪ್ರಾಣಾಯಾಮ ಹಾಗೂ ಧ್ಯಾನ ಉಚಿತ ತರಗತಿಯನ್ನು ಜೂ.5 ರಿಂದ ನಗರದೆಲ್ಲೆಡೆ ಆರಂಭಿಸಲಾಗುವುದೆಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸಿ.ಎಸ್. ಶ್ರೀನಿವಾಸ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ.21 ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ಜೂ.5 ರಿಂದ 20 ರವರೆಗೆ ಒಟ್ಟು 15 ದಿನಗಳ ಕಾಲ ಜಿಲ್ಲೆಯ 23 ಸ್ಥಳಗಳಲ್ಲಿ ನಡೆಸಲಾಗುವುದೆಂದು ಹೇಳಿದರು.
ಜೂ.21 ರಂದು ಜಿಲ್ಲಾಡಳಿತ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು, ಚಿಕ್ಕಮಗಳೂರು ನಗರ, ಕಡೂರು, ಶೃಂಗೇರಿ, ಲಿಂಗದಹಳ್ಳಿ ಈ ನಾಲ್ಕು ಕಡೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದಿನ ಯಾಂತ್ರಿಕ ಜಗತ್ತಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಒತ್ತಡ, ಮಾನಸಿಕ ಕ್ಷೆಭೆಗಳಿಂದ ಮನಸ್ಸು, ದೇಹವನ್ನು ಪ್ರಶಾಂತವಾಗಿಡಲು ಯೋಗ ಒಂದೇ ಸಾಧನವಾಗಿದ್ದು, ಆಧುನಿಕ ಜೀವನದ ಕೊಡುಗೆಗಳಾಗಿ ರಕ್ತದೊತ್ತಡ, ಮಧುಮೇಹ, ಆಲಸ್ಯ, ಬೊಜ್ಜು, ಮೂಲವ್ಯಾಧಿ, ಅಸಿಡಿಟಿ, ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ಮಾನಸಿಕ ಒತ್ತಡ, ಮಂಡಿನೋವು ಮತ್ತು ಬೆನ್ನುನೋವು ಇವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮವನ್ನು ಯೋಗಾಭ್ಯಾಸದ ಮೂಲಕ ಪಡೆದು ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಿಕೊಳ್ಳಬಹುದಾಗಿದೆ ಎಂದರು.
ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರು ಸೇರಿದಂತೆ ಎಲ್ಲಾ ವರ್ಗದ ಸಾರ್ವಜನಿಕರು ಮತ್ತು ಯೋಗಾಸಕ್ತರು ಈ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರತಿನಿತ್ಯ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ದಿನದಲ್ಲಿ 1 ಗಂಟೆಗಳ ಕಾಲ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಚಿಕ್ಕಮಗಳೂರಿನ ಪುಷ್ಪಪ್ರಕಾಶ್-8310587326, ಶಾರದಾ-9449175939, ಶ್ರೀನಿವಾಸ್-9449167479, ಶೃಂಗೇರಿ ನಾಗೇಶ್ ಕಾಮತ್-7259102677, ಮಂಜುನಾಥ್ ಕಡೂರು-9900440087, ಪಾರ್ವತಿ ಲಿಂಗದಹಳ್ಳಿ-9743042575 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಸಂಚಾಲಕ ಸೋಮಣ್ಣ, ಶಿಕ್ಷಕರುಗಳಾದ ಅವಿನಾಶ್ ಬಿ.ಎನ್, ಜಿಲ್ಲಾ ಸಂಚಾಲಕಿ ಶಾರದಾ, ಲಕ್ಷ್ಮಿ ಉಪಸ್ಥಿತರಿದ್ದರು.



