ಸಹಕಾರ ಸಂಘಗಳು ಗ್ರಾಮೀಣ ಅಭಿವೃದ್ಧಿಯ ಬೆನ್ನೆಲುಬಾಗಿದ್ದು, ರೈತರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಬುಧವಾರ ತಾಲೂಕಿನ ಹಂತೂರು ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಕಟ್ಟಡ ಮತ್ತು ಮೊದಲ ಅಂತಸ್ತಿನ ಸಭಾಂಗಣ ಕಾಮಗಾರಿ ಶಂಕು ಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೆಚ್ಚಾಗಿ ಹಿರಿಯರು ನಿರ್ದೇಶಕರಾಗುತ್ತಿದ್ದರು. ಆದರೆ ಈಗ ಯುವಕರು ಅಧಿಕ ಸಂಖ್ಯೆಯಲ್ಲಿ ನಿರ್ದೇಶಕರಾಗುತ್ತಿರುವುದು ಉತ್ತಮ ಬೆಳವಣಿಗೆ. ನಿರ್ದೇಶಕರೆಲ್ಲರೂ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸಬೇಕು. ಆಗ ಮಾತ್ರ ತಮ್ಮ ಸ್ಥಾನ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.
ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಸಹಕಾರ ಸಂಘದ ಮೂಲಕ ರೈತರಿಗೆ ಗುಣಮಟ್ಟದ ಗೊಬ್ಬರ ಒದಗಿಸಬೇಕು. ಹೆಚ್ಚಾಗಿ ಸಾಲ ನೀಡುವ ಜತೆಗೆ ಸಾಲ ಮರುಪಾವತಿ ಅಚ್ಚುಕಟ್ಟಾಗಿ ನಡೆಸಿದರೆ ಸಂಘವನ್ನು ಅಭಿವೃದ್ಧಿಯತ್ತ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಂತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜಿ. ಉತ್ತಮ್ಕುಮಾರ್, ಉಪಾಧ್ಯಕ್ಷ ಕೆ.ಎನ್.ಮಿಥುನ್, ನಿರ್ದೇಶಕರಾದ ವಿನೋದ್ ಕಣಚೂರು, ಆದರ್ಶ ಕನ್ನಹಳ್ಳಿ, ನಯನ್ ಕಣಚೂರು, ಪ್ರಸನ್ನ ಅಂಗಡಿ, ರತನ್ ದೇವವೃಂದ, ಶ್ರೀನಿವಾಸ್ ಉಗ್ಗೇಹಳ್ಳಿ, ನೇಪಾ ಆದಿತ್ಯ ಹಂತೂರು, ಶೋಭಾ ಕಣಚೂರು, ನಾಮ ನಿರ್ದೇಶನ ಸದಸ್ಯರಾದ ರಮೇಶ್ ಪಟೇಲ್ ದೇವವೃಂದ, ನಾಗೇಶ್ಗೌಡ ಜೇನುಬೈಲ್ ಮತ್ತಿತರರಿದ್ದರು.



