ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಂದೂರು ತಳವಾರ ಬಟ್ರಗದ್ದೆ ಸಮೀಪ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.
ಸುಮಾರು 30 ವರ್ಷ ವಯಸ್ಸಿನ ಗಂಡು ಕಾಡಾನೆಯ ಕಳೆಬರಹ ಶುಕ್ರವಾರ ಮುಂಜಾನೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಂಡುಬಂದಿತ್ತು. ಆನೆ ಎರಡು ದಿನದ ಹಿಂದೆ ಕೊನೆಯುಸಿರೆಳೆದಿರಬಹುದು ಎಂದು ಅಂದಾಸಿಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಅರಣ್ಯ ವಲಯ ವ್ಯಾಪ್ತಿಗೆ ಬರುವ ಮೀಸಲು ಅರಣ್ಯದಲ್ಲಿ ಕಾಡಾನೆ ಮೃತಪಟ್ಟಿದೆ.
ಕಾಡಾನೆ ಸಾವಿಗೆ ನಿಖರ ಕಾರಣ ತಿಳಿಬಂದಿಲ್ಲ. ಮೇಲ್ನೋಟಕ್ಕೆ ವಿದ್ಯುತ್ ಅವಘಡದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆದರೆ ಆನೆ ಮೃತಪಟ್ಟ ಸ್ಥಳದ ಸಮೀಪ ಯಾವುದೇ ವಿದ್ಯುತ್ ತಂತಿ ಹಾದುಹೋಗಿಲ್ಲ. ಹಾಗಾಗಿ ಕಾಡಾನೆ ಹೇಗೆ ಸಾವನ್ನಪ್ಪಿತರಬಹುದು ಎಂಬುದು ಮರಣೋತ್ತರ ಪರೀಕ್ಷೆಯಿಂದಷ್ಟೇ ಸ್ಪಷ್ಟವಾಗಬೇಕಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ಧಾರೆ.
ಮೃತ ಕಾಡಾನೆ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಸ್ಥಳಕ್ಕೆ ವಲಯ ಮತ್ತು ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



