ಲಯನ್ಸ್ ಎಂಬುದು ವಿಶ್ವದ ಅತಿ ದೊಡ್ಡ ಸೇವಾ ಸಂಸ್ಥೆಯಲ್ಲಿ ಒಂದಾಗಿದೆ. ಸಂಸ್ಥೆಯ ಮುಖಾಂತರ ಸಮಾಜದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಮಾಡಬೇಕೆಂದು ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಸಿ ಮಾತನಾಡಿದರು. ಆಳುವ ಸರಕಾರ ಸಮಾಜದ ಒಳಿತಿಗೆ ಎಷ್ಟೇ ಯೋಜನೆ ರೂಪಿಸಿದರೂ ಕೂಡ ಸಂಘ ಸಂಸ್ಥೆ ತಮ್ಮ ಶಕ್ತಿ ಮೀರಿ ಸೇವಾ ಚಟುವಟಿಕೆ ಮುಂದುವರೆಸಿದರೆ ಸಂಸ್ಥೆಗೆ ಉತ್ತಮ ಹೆಸರು ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಎಚ್.ಬಿ.ಸತ್ಯನಾರಾಯಣ ಹಳೆಕೋಟೆ ಅಧಿಕಾರ ಸ್ವೀಕರಿಸಿ ಮಾತನಾಡಿ, ನಮ್ಮ ಕಾರ್ಯವೇ ನಮ್ಮ ಗುರುತಾಗಬೇಕು. ಸಮಾಜದ ಅಭಿವೃದ್ಧಿಗಾಗಿ ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರ ಮಾರ್ಗದರ್ಶನ ಪಡೆದು ಅರ್ಥಪೂರ್ಣ ಸೇವಾ ಕಾರ್ಯಕ್ರಮ ಹಮ್ಮಿಕೊಂಡು, ಲಯನ್ಸ್ ಸಂಸ್ಥೆಯ ಗೌರವ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಪ್ರದೀಪ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನೂತನ ಕಾರ್ಯದರ್ಶಿಯಾಗಿ ರವಿಕುಮಾರ್, ಕೋಶಾಧಿಕಾರಿಯಾಗಿ ಹರ್ಷ ಹಳೇಕೋಟೆ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಬಿ.ಎಲ್.ದಿನೇಶ್ ವಹಿಸಿದ್ದರು.
ಪ್ರಾಂತಿಯ ಅಧ್ಯಕ್ಷ ಬಿ.ಎನ್.ವೆಂಕಟೇಶ್, ವಲಯ ಅಧ್ಯಕ್ಷ ಕೆ.ಟಿ.ದೇವಪ್ಪ, ನಿರ್ಗಮಿತ ಕಾರ್ಯದರ್ಶಿ ಕೆ.ಜಿ.ಅಣ್ಣೆಗೌಡ, ಪ್ರತಿಭಾ ಹೆಬ್ಬಾರ್, ವಿದ್ಯಾ ದಿನೇಶ್ ಮತ್ತಿತರರಿದ್ದರು.


