ರೋಟರಿ ಕ್ಲಬ್ ಆಫ್ ಮೂಡಿಗೆರೆ ವತಿಯಿಂದ “ಮಾದಕ ದ್ರವ್ಯ ವ್ಯಸನ ಮುಕ್ತಿ ಮತ್ತು ನಿರ್ಮೂಲನೆ” ಕುರಿತ ಜಾಗೃತಿ ಕಾರ್ಯಕ್ರಮವು ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೂಡಿಗೆರೆ ಠಾಣೆಯ PSI ಹರ್ಷವರ್ಧನ್ ಅವರು, ಮಾದಕ ದ್ರವ್ಯಗಳಿಂದ ಯುವಜನತೆ ಹಾಳಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳು ಹಾಗೂ ಅವುಗಳಿಂದ ಉಂಟಾಗುವ ಕಾನೂನು ತೊಂದರೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. “ನೋಡು ಬೇಡ ಬ್ರೋ ಬೇಡ” ಎಂದು ಹೇಳಿ ಅಂತಹ ವ್ಯಸನಗಳಿಂದ ದೂರವಿರಲು ವಿದ್ಯಾರ್ಥಿಗಳಲ್ಲಿ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರು ಮಾತನಾಡಿ, “ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ಶಿಕ್ಷಣವೊಂದೇ ನಿಮ್ಮ ಬದುಕಿಗೆ ಅರ್ಥ ಮತ್ತು ಗೌರವವನ್ನು ತಂದುಕೊಡುತ್ತದೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಕೆ. ದಿನೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಫಾಸ್ಟ್ AG ವಿನೋದ್ ಕುಮಾರ್ ಶೆಟ್ಟಿ, H.K. ಯೋಗೇಶ್, ಆದರ್ಶ್, ದೀಪಕ್ ದೊಡಯ್ಯ, ಕಾರ್ಯದರ್ಶಿ ಸಂತೋಷ್ ಸೇರಿದಂತೆ ಹಲವು ರೋಟರಿಯನ್ಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಪೂರ್ವ ಅವರು ಪ್ರಾರ್ಥಿಸಿದರು. ಬಿಂದು ಲೋಕೇಶ್ ಅವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರಸಾದ್ ಬಕ್ಕಿ ಅವರು ನಿರೂಪಿಸಿದರು. ಕೊನೆಯಲ್ಲಿ ಅನುಷಾ ಅವರು ವಂದನಾರ್ಪಣೆ ಸಲ್ಲಿಸಿದರು.


