ಮೂಡಿಗೆರೆ ಪಟ್ಟಣದ ಎಂಜಿಎಂ ಸರಕಾರಿ ಆಸ್ಪತ್ರೆಯ ಆವರಣದೊಳಗೆ ಮೂಡಿಗೆರೆ ಟಿಎಪಿಸಿಎಂಎಸ್ ಸಂಸ್ಥೆಯಿಂದ ಮೆಡಿಕಲ್ ಶಾಪ್ ನಡೆಸುತ್ತಿರುವುದು ಮತ್ತು ಅಲ್ಲಿ ಬ್ರಾಂಡೆಡ್ ಔಷಧಿಗಳನ್ನು ಮಾರಾಟ ಮಾಡುತ್ತಿರುವುದು ನಿಯಮ ಬಾಹೀರವಾಗಿ ಎಂದು ಸುರೇಶ್ ಕಣಚೂರು ಆರೋಪಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1984ರಂದು ಲೋಕಸಭೆ ಸದಸ್ಯರಾಗಿದ್ದ ಡಿ.ಎಂ.ಪುಟ್ಟೇಗೌಡ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಅಂದಿನ ಕಾಲದಲ್ಲಿ ಮೆಡಿಕಲ್ ಶಾಪ್ ಗಳು ಕಡಿಮೆ ಸಂಖ್ಯೆಯಲ್ಲಿ ಇದ್ದುದ್ದರಿಂದ ಬಡರೋಗಿಗಳಿಗೆ ತೊಂದರೆಯಾಗಬಾರದೆಂಬ ಒಳ್ಳೆಯ ಉದ್ದೇಶದಿಂದ ಎಂಜಿಎಂ ಆಸ್ಪತ್ರೆಯ ಆವರಣದೊಳಗೆ ಸಹಕಾರ ಸಂಸ್ಥೆಯೊಂದಕ್ಕೆ ಔಷಧಿ ಅಂಗಡಿ ತೆರೆಯಲು ಅವಕಾಶ ನೀಡಿದ್ದರು. ಆದರೆ ಆಸ್ಪತ್ರೆಯ ಆವರಣದಲ್ಲಿ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಬ್ರಾಂಡೆಡ್ ಔಷಧಿ ಮಾರಾಟ ಮಾಡಬಾರದೆಂಬ ಸರಕಾರದ ಆದೇಶವಿದ್ದರೂ ಇಲ್ಲಿ ಬ್ರಾಂಡೆಡ್ ಔಷಧಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
ರೋಗಿಗಳಿಗೆ ಬೇಕಾದ ಬ್ರಾಂಡೆಡ್ ಔಷಧಿ ಖರೀದಿಸಲು ಸರಕಾರವೇ ಹಣ ನೀಡುತ್ತಿದೆ. ಹೀಗಿರುವಾಗ ಆಸ್ಪತೆಯಲ್ಲಿ ಹೊರಗಡೆ ಔಷಧಿ ಖರೀಧಿಸಲು ಚೀಟಿ ಬರೆದುಕೊಡಲಾಗುತ್ತಿದೆ. ಹಾಗಾದರೆ ದಿನಕ್ಕೆ ಬರುವ 10.ಸಾವಿರ ರೂ ಏನು ಮಾಡುತ್ತಿದ್ದಾರೆಂಬ ಬಗ್ಗೆ ಸ್ಪಷ್ಟಪಡಿಸಬೇಕು. ಮೂಡಿಗೆರೆ ಎಂಜಿಎಂ ಆಸ್ಪತ್ರೆ ಕಟ್ಟಡ ದೊಡ್ಡ ಆಸ್ಪತ್ರೆಯ ಹಾಗೆ ಕಂಡರೂ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ರೋಗಿಗಳಿಗೆ ಸಮರ್ಪಕವಾದ ತುರ್ತು ಚಿಕಿತ್ಸೆ ಸೌಲಭ್ಯವಿಲ್ಲ. ಈ ಬಗ್ಗೆ ಶಾಸಕರು ಹಾಗೂ ಸಂಸದರು ಗಮನಹರಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವರಾಜ್ ಕಣಚೂರು, ಅರುಣ್ ಕುಂಬರಡಿ ಉಪಸ್ಥಿತರಿದ್ದರು.


