naxal1_page-0001

 

 

ಇಪ್ಪತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ  ಮೂಡಿಗೆರೆಯ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಕೇರಳದ ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ, ಕಾಡಾನೆ ದಾಳಿಗೆ ಒಳಗಾಗಿ ಗಾಯಗೊಂಡ ವೇಳೆ ಸುರೇಶ್ ನನ್ನು ಚಿಕಿತ್ಸೆ ಕೊಡಿಸಿ ಬಂಧಿಸಿದ್ದಾರೆ.

ಮಲೆನಾಡಿನ ನಕ್ಸಲ್ ಚಳುವಳಿಯ ಪ್ರಮುಖರಲ್ಲಿ ಒಬ್ಬನಾಗಿದ್ದ ಸುರೇಶ್ ಅಲಿಯಾಸ್ ಮಹದೇವ ಕೇರಳದ ಕಣ್ಣೂರಿನ ಅರಣ್ಯದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕಾಡಾನೆ ದಾಳಿ ಮಾಡಿದ ವೇಳೆ ಗಾಯಗೊಂಡು ಬಿದ್ದಿದ್ದ ಸುರೇಶ್ ನನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಮೊದಲು ಚಿಕಿತ್ಸೆ ಕೊಡಿಸಿದ ಅಲ್ಲಿನ ಪೊಲೀಸರು ನಂತರ ವಿಳಾಸ ವಿಚಾರಣೆ ವೇಳೆ ಈತನನ್ನು ನಕ್ಸಲ್ ಎಂದು ಗುರುತಿಸಿದ್ದಾರೆ.

ಮೂಲತಃ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಅಂಗಡಿ ಗ್ರಾಮದ ದಲಿತ ಕುಟುಂಬದ ಸುರೇಶ್ ಕಳೆದ ಇಪ್ಪತ್ತೊಂದು ವರ್ಷಗಳಿಂದ ಕಣ್ಮರೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ನಕ್ಸಲೀಯ ಕೃತ್ಯ ಪ್ರಕರಣಗಳಲ್ಲಿ ಈತನು ಬೇಕಾಗಿದ್ದ. ಸರ್ಕಾರ ಇವನನ್ನು ಹಿಡಿದು ಕೊಟ್ಟವರಿಗೆ 5 ಲಕ್ಷ ಬಹುಮಾನ ಸಹ ಘೋಷಿಸಿತ್ತು. ಈತ ಸುರೇಶ, ಪ್ರದೀಪ್, ಮಹದೇವ ಎಂದು ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಂಡಿದ್ದ. ಸುರೇಶ್ 2003ರಿಂದ ಕಣ್ಮರೆಯಾಗಿದ್ದ.

ಕೇರಳದ ಕಾನನದಲ್ಲಿ ನಕ್ಸಲ್ ತಂಡದೊಂದಿಗೆ ಗುರುತಿಸಿಕೊಂಡು ಒಡಾಡಿಕೊಂಡಿದ್ದ ಇವನ ಮೇಲೆ ಕಾಡಾನೆ ದಾಳಿ ನಡೆಸಿತ್ತು. ತಂಡದ ಇತರ ಸದಸ್ಯರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದರು. ಆದರೆ ಕಾಲಿಗೆ ತೀವ್ರ ಗಾಯಗೊಂಡಿದ್ದ ಸುರೇಶ್ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಾಡಿನಲ್ಲಿ ಸ್ಥಳೀಯರು ಗಾಯಗೊಂಡಿದ್ದ ಸುರೇಶ್ ನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಾಣೆಯಾಗುವಾಗ ಯುವಕನಾಗಿದ್ದ ಸುರೇಶ್ ಇದೀಗ ತುಂಬಾ ವಯಸ್ಸಾದಂತೆ ತೋರುತ್ತಿದ್ದು, ಕಾಡಿನ ಜೀವನದಿಂದ ಸಾಕಷ್ಟು ಸೊರಗಿದಂತೆ ಕಾಣುತ್ತಿದೆ. ಸುರೇಶ್ ಅಂಗಡಿ ಶಾಲೆ ಮತ್ತು ಮೂಡಿಗೆರೆಯಲ್ಲಿ ಕಾಲೇಜು ವ್ಯಾಸಾಂಗ ಮಾಡಿದ್ದ. ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಮಲೆನಾಡು ಭಾಗದಲ್ಲಿ ತೀವ್ರವಾಗಿದ್ದ ನಕ್ಸಲ್ ಚಟುವಟಿಕೆಯಿಂದ ಆಕರ್ಷಿತನಾಗಿದ್ದ ಸುರೇಶ್ ಇದ್ದಕ್ಕಿದಂತೆ ಕಣ್ಮರೆಯಾಗಿ ನಕ್ಸಲ್ ತಂಡ ಸೇರಿಕೊಂಡಿದ್ದ. ಇದೀಗ ಕಾಡಾನೆ ಕಾರಣದಿಂದ ಬಂಧಿತನಾಗಿದ್ದಾನೆ. ಕೇರಳದ ಕಣ್ಣೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಸುರೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದೇ ಸಂದರ್ಭದಲ್ಲಿ ಇತ್ತೀಚೆಗೆ  ಕೇರಳದಲ್ಲಿ ಬಂಧಿತಳಾಗಿದ್ದ ನಕ್ಸಲ್ ನಾಯಕಿ ಶ್ರೀಮತಿಗೆ ಎನ್.ಆರ್. ಪುರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಎನ್.ಆರ್.ಪುರ ಮೂಲದ ಶ್ರೀಮತಿ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡು ಕಣ್ಮರೆಯಾಗಿದ್ದಳು. ಶ್ರೀಮತಿ ಮೇಲೆ 12ಕ್ಕೂ ಅಧಿಕ ಕೇಸುಗಳಿದ್ದು, 2002ರಿಂದ ಕಣ್ಮರೆಯಾಗಿದ್ದಳು. ಇತ್ತೀಚೆಗೆ ಕೇರಳ ಪೊಲೀಸರ ಕೂಬಿಂಗ್ ಕಾರ್ಯಾಚರಣೆ ವೇಳೆ ಶ್ರೀಮತಿ ಬಂಧಿತಳಾಗಿದ್ದಳು.

ನಂತರ ಶ್ರೀಮತಿಯನ್ನು ಕರ್ನಾಟಕ ಪೊಲೀಸರ ವಶಕ್ಕೆ ನೀಡಲಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ