ಕಳಸ ಪಟ್ಟಣದಲ್ಲಿ ನಡೆದ ಕಳಸೇಶ್ವರ ಜಾತ್ರಾ ಮಹೋತ್ಸವವದಲ್ಲಿ ರಾಜಾರೋಷವಾಗಿ ಇಸ್ಪೀಟ್ ಆಟ ನಡೆಸಿದ್ದು, ಜಾತ್ರೆಯನ್ನು ಜೂಜು ಅಡ್ಡೆಯಾಗಿಸಿದ್ದಕ್ಕೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಣವನ್ನು ಕಟ್ಟಿಸಿಕೊಂಡು ಇಸ್ಪೀಟ್ ಆಟ ಆಡಿಸಿದ್ದು, ಇದರಲ್ಲಿ ಕಳಸ ಭಾಗದ ಅನೇಕ ಯುವಕರು, ವಯಸ್ಕರು ಹಣವನ್ನು ಕಳೆದೆಕೊಂಡಿದ್ದಾರೆ. ತಡರಾತ್ರಿಯ ವರೆಗೆ ಈ ಅಡ್ಡೆಯನ್ನು ನಡೆಸಿದ್ದು, ಇದರ ಬಗ್ಗೆ ಜನ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು ಧಾರ್ಮಿಕ ಮನೋಭಾವನೆ ಮತ್ತು ಭಕ್ತಿಭಾವದ ಹಿನ್ನಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕವಾದ ಕಳಸ ಜಾತ್ರೆಯನ್ನು ಈ ಬಾರಿ ಜೂಜಿನ ಅಡ್ಡೆ ಮಾಡಲಾಗಿತ್ತು. ರಸ್ತೆ ಬದಿಯಲ್ಲಿ ಹೊರ ಊರಿನಿಂದ ಬಂದವರು ಇಸ್ಪೀಟ್ ಅಡ್ಡೆಯನ್ನು ಹಾಕಿದ್ದರು. ಅಂಗಡಿ ಮುಗ್ಗಟ್ಟುಗಳ ಸಾಲಿನಲ್ಲಿ ಇಂತಹ ಕಾನೂನುಬಾಹೀರ ಕೃತ್ಯ ನಡೆದಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೂಜು ಅಡ್ಡೆ ನಡೆಸಲು ಅನುಮತಿ ಕೊಟ್ಟವರಾದರೂ ಯಾರು ? ಈ ಕೃತ್ಯವನ್ನು ಕಂಡೂ ಪೊಲೀಸರು ಯಾಕೆ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆಯ ಮೇಲೆಯೇ ಸಂಶಯ ಮೂಡುತ್ತದೆ ಎಂದಿದ್ದಾರೆ.
ಈ ಹಿಂದೆಯೂ ಒಮ್ಮೆ ಇಂತಹ ಕೃತ್ಯ ನಡೆದಾಗ ಎಸ್ಪಿ ಅಣ್ಣಾಮಲೈ ಅವರ ಗಮನಕ್ಕೆ ಬಂದು ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿದ್ದರು. ಗೊತ್ತಿದ್ದು, ಗೊತ್ತಿದ್ದು ಈ ಬಾರಿ ಕಳಸ ಜಾತ್ರೆಯಲ್ಲಿ ಜೂಜಾಟಕ್ಕೆ ಮತ್ತೆ ಅವಕಾಶ ನೀಡಲಾಗಿದೆ. ಹಾಗಾಗಿ ಕಳಸ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



