ಕರ್ನಾಟಕ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ 6ನೇ ಜಿಲ್ಲಾ ಜಾನಪದ ಸಮ್ಮೇಳನ ನಗರದ ಕುವೆಂಪು ಕಲಾ ಮಂದಿರದಲ್ಲಿ ಸಂಭ್ರಮದಿಂದ ನೆರವೇರಿತು.
ಸಮ್ಮೇಳನದಲ್ಲಿ ಪ್ರಾರ್ಥನೆ, ಸ್ವಾಗತದಿಂದ ಹಿಡಿದು ವಂದನಾರ್ಪಣೆಯವರೆಗೆ ನಡೆದ ಎಲ್ಲಾ ಕಾರ್ಯಕ್ರಮಗಳೂ ಜಾನಪದ ಮಯವಾಗಿದ್ದವು, ಸಮ್ಮೇಳನಾಧ್ಯಕ್ಷರು, ಉದ್ಘಾಟಕರು, ಸಮ್ಮೇಳನದಲ್ಲಿ ಭಾಗವಹಿಸಿದ್ದ ಗಣ್ಯರು ಭಾಷಣದ ವೇಳೆ ಜಾನಪದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.
ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ರೈತ ಜಾನಪದ, ಮಹಿಳಾ ಜಾನಪದ, ಜಾನಪದ ಜಗುಲಿ ಕುರಿತ ವಿಚಾರಗೋಷ್ಠಿಗಳು, ಜಾನಪದ ಗೀತೆಗಳ ಗಾಯನ, ನೃತ್ಯ ಜರುಗಿದವು.
ಈ ವೇಳೆ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಾನಪದರು ಬಳಸುತ್ತಿದ್ದ ಅಪರೂಪದ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು,ಬೆಳಿಗ್ಗೆ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ರಾಷ್ಟ್ರಧ್ವಜಾರೋಹಣ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ ಹಿ.ಚಿ. ಬೋರ ಲಿಂಗಯ್ಯ ನಾಡದ್ವಜಾರೋಹಣ, ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸಿದರು.
ತಾಲೂಕು ಕಚೇರಿ ಆವರಣದಿಂದ ವಿವಿಧ ಜಾನಪದ ಕಲಾತಂಡಗಳು ಮತ್ತು ಪೂರ್ಣಕುಂಭಗಳ ನಡುವೆ ಸಮ್ಮೇಳನಾಧ್ಯಕ್ಷೆ ಮಾಜಿ ಸಚಿವೆ, ಹಿರಿಯ ಜಾನಪದ ಕಲಾವಿದೆ, ಡಾ.ಮೊಟಮ್ಮ ಅವರನ್ನು ಜೋಡೆತ್ತಿನ ಗಾಡಿಯಲ್ಲಿ ಮೆರವಣಿಗೆ ಮುಖಾಂತರ ಕುವೆಂಪು ಕಲಾಮಂದಿರಕ್ಕೆ ಕರೆತರಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೀರಗಾಸೆ, ಡೊಳ್ಳು ಕುಣಿತ, ಪಟ ಕುಣಿತ, ದೇವರ ಅಡ್ಡೆ ಸೇರಿದಂತೆ ಜಾನಪದ ಕಲಾತಂಡಗಳ ನೃತ್ಯ ಜಾನಪದ ಲೋಕವನ್ನು ಅನಾವರಣಗೊಳಿಸಿದವು, ಮಕ್ಕಳಿಂದ ನಡೆದ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು, ಗ್ರಾಮೀಣ ವಾದ್ಯದ ಲಯಕ್ಕೆ ಯುವ ಜನತೆ ಕುಣಿದು ಕುಪ್ಪಳಿಸಿದರು,
ಸಮ್ಮೇಳನಾಧ್ಯಕ್ಷೆ ಡಾ.ಮೊಟಮ್ಮ ಸಾಂಪ್ರದಾಯಿಕ ಧಿರಿಸುತೊಟ್ಟು ಗಮನ ಸೆಳೆದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋಷಿತ ಸಮುದಾಯದ ಮಹಿಳೆಯೋರ್ವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಸಂತಸದ ಸಂಗತಿ ಎಂದರು. ಮೋಟಮ್ಮನವರನ್ನು ಕಂಡರೆ ಅವರು ರಾಜಕಾರಣಿ ಅನಿಸುವುದಿಲ್ಲ, ಅವರೊಬ್ಬ ಹಿರಿಯ ಜಾನಪದ ಕಲಾವಿದೆ, ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಅಭಿನಂದನಾರ್ಹ ಎಂದರು. ಜಾನಪದ ಕೇವಲ ಕಲೆಯಲ್ಲ, ಅದು ನಮ್ಮ ಜೀವನ ಕ್ರಮ, ರೈತರು ಮತ್ತು ಗ್ರಾಮೀಣ ಮಹಿಳೆಯರಿಂದ ಉಳಿದು ಬೆಳೆದು ಬಂದಿರುವ ಜಾನಪದವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು, ಆ ಮೂಲಕ ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ ಹಿ.ಚಿ. ಬೋರಲಿಂಗಯ್ಯ ಮಾತನಾಡಿ ಕರ್ನಾಟಕ ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಜಾನಪದ ಕಲೆಗಳನ್ನು ಹೊಂದಿರುವ ರಾಜ್ಯ, ಇಲ್ಲಿ 184 ಜಾನಪದ ಕಲೆಗಳಿವೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಜಾನಪದ ಕಲೆಗಳಿವೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಕಳೆದ 46 ವರ್ಷಗಳಿಂದ ದೇಶವಿದೇಶಗಳಲ್ಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡುತ್ತಿದೆ ಎಂದ ಅವರು ಜಾನಪದ ಕಲಾವಿದರನ್ನು ಎರಡನೇ ದರ್ಜೆಯ ಕಲಾವಿದರಂತೆ ನಡೆಸಿಕೊಳ್ಳುತ್ತಿರುವುದು ವಿಷಾದನೀಯ, ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಗ್ರಾಮೀಣ ಜಾನಪದ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ನಗರಗಳಲ್ಲಿ ವೇದಿಕೆ ಕಲ್ಪಿಸಬೇಕು, ಅವರಿಗೆ ಮಾಸಾಶನ ನೀಡಬೇಕು ಎಂದರು.
ಆಶಯ ನುಡಿಗಳನ್ನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತಿನ ಜಿಲ್ಲಾ ಘಟಕದಿಂದ ಹೋಬಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನೂರಕ್ಕೂ ಹೆಚ್ಚು ಜಾನಪದ ಸಮ್ಮೇಳನಗಳನ್ನು, 130ಕ್ಕೂ ಹೆಚ್ಚು ಜಾನಪದ ಕಾರ್ಯಕ್ರಮಗಳನ್ನು ತರಬೇತಿ ಶಿಬಿರಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಗೌರವಾಧ್ಯಕ್ಷ ಡಾ ಜೆ.ಪಿ. ಕೃಷ್ಣೇಗೌಡ ಜಗತ್ತಿನ ಎಲ್ಲಾ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮೂಲ ಬೇರು ಜಾನಪದ, ಹಾಗಾಗಿ ಅದನ್ನು ಮುಂದಿನ ಪೀಳಿಗೆಗೆ ಉಳಿಸಲೇಬೇಕು ಎಂದರು.

ಸಮ್ಮೇಳನಾಧ್ಯಕ್ಷೆ ,ಹಿರಿಯ ಜಾನಪದ ಕಲಾವಿದೆ ಮಾಜಿ ಸಚಿವೆ ಡಾ ಮೋಟಮ್ಮ ಮಾತನಾಡಿ ಜಾನಪದವೆಂದರೆ ನಮ್ಮ ಹಿರಿಯರ ಜೀವನ, ಅವರ ನಡೆ-ನುಡಿ ಆಚಾರ ವಿಚಾರವೇ ಜಾನಪದ, ಅದು ಉಳಿದು ಬೆಳೆಯಬೇಕಾದರೆ ಹೆತ್ತವರು ತಮ್ಮ ಮಕ್ಕಳಿಗೆ ಅದನ್ನು ಕಲಿಸಬೇಕು, ಶಾಲಾ ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.
ಆಧುನಿಕತೆಯ ಅಬ್ಬರ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ಗೀಳಿನಿಂದಾಗಿ ನಮ್ಮ ನಡೆ-ನುಡಿ ಆಚಾರ, ವಿಚಾರ ಆಹಾರ ಪದ್ದತಿ, ಎಲ್ಲವೂ ಬದಲಾಗಿವೆ, ಹಸೆ ಹಾಡುಗಳು, ಸೋಭಾನೆ ಪದಗಳು, ನಮ್ಮ ಹಿರಿಯರು ಮಾಡುತ್ತಿದ್ದ ನೈಸರ್ಗಿಕ ವಾದ, ಆರೋಗ್ಯಕ್ಕೆ ಪೂರಕವಾದ ಆಹಾರಗಳು, ಕೂಡು ಕುಟುಂಬಗಳು ಕಣ್ಮರೆಯಾಗಿವೆ ಎಂದು ವಿಷಾದಿಸಿದ ಅವರು ಕೆಮಿಕಲ್ ಬೆರೆಸಿ ಮಾಡುವ ಬರ್ಗರ್, ಪಿಜ್ಜಾ, ಮನಸ್ಸನ್ನು ಕೆರಳಿಸುವ ಗೀತೆಗಳು, ಪಾಶ್ಚಾತ್ಯ ಸಂಸ್ಕೃತಿಯ ಹರುಕು ಬಟ್ಟೆ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ ಪದಗಳ ಬದಲಿಗೆ ಎಲ್ಲರಿಗೂ ಅನ್ವಯಿಸುವ ಆಂಟಿ, ಅಂಕಲ್ ಪದಗಳು ಆ ಸಂಸ್ಕೃತಿ, ಸಂಸ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು.
ಇದೇ ವೇಳೆ ತಮ್ಮ ಗೆಳತಿಯರೊಂದಿಗೆ ಸೋಭಾನೆ ಪದಗಳನ್ನು ಹಾಡಿ ರಂಜಿಸಿದ ಅವರು ಹೆತ್ತವರು ತಮ್ಮ ಮಕ್ಕಳಿಗೆ ನಮ್ಮ ಹಿರಿಯರ ಆಚಾರ, ವಿಚಾರ, ನಡೆ-ನುಡಿ ಸಂಸ್ಕೃತಿ, ಸಂಸ್ಕಾರ, ಹಾಡು, ಹಸೆ, ಸಂಪ್ರದಾಯಗಳನ್ನು ಕಲಿಸಬೇಕು, ಹಾಗಾದರೆ ಮಾತ್ರ ಜಾನಪದ ಉಳಿಯುತ್ತದೆ ಎಂದರು.
ಇದೇ ವೇಳೆ ಜಾನಪದ ಸಿರಿ ಸ್ಮರಣಿಕೆಯನ್ನು ಬಿಡುಗಡೆಗೊಳಿಸಲಾಯಿತು, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ವರ್ಷ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಹಿರಿಯ ವೀರಗಾಸೆ ಕಲಾವಿದ ಡಾ ಮಾಳೇನಹಳ್ಳಿ ಬಸಪ್ಪ, ಡಾ ವಿನಾಯಕ್ ಸಿಂಧಿಗೆರೆ, ಉದ್ಯಮಿ ನಂಜೇಶ್ ಬೆಣ್ಣೂರು, ಲಯನ್ಸ್ ಅಧ್ಯಕ್ಷ ಸಿ.ಎನ್. ಕುಮಾರ್, ಪರಿಷತ್ತಿನ ತಾಲೂಕು ಗೌರವಾಧ್ಯಕ್ಷೆ ಸುಮಾ ಪ್ರಸಾದ್ ಉಪಸ್ಥಿತರಿದ್ದರು.
ವರದಿ : ಡಿ.ಎಂ.ಮಂಜುನಾಥಸ್ವಾಮಿ



