ಆಡಳಿತ ಪಕ್ಷಗಳು ರೈತರ ಹಾಗೂ ಜನರ ಹಿತ ಕಾಪಾಡುವ ಕೆಲಸ ಮಾಡಬೇಕೆ ಹೊರತು, ಜನರ ಜೀವ ಹಿಂಡುವ ಕೆಲಸ ಮಾಡಬಾರದೆಂದು ಬಿಜೆಪಿ ಮೂಡಿಗೆರೆ ತಾಲ್ಲೂಕು ವಕ್ತಾರ ವಿನಯ ಹಳೆಕೋಟೆ ಆರೋಪಿಸಿದ್ದಾರೆ.
ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೂಡಿಗೆರೆ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ. ರಸ್ತೆ ಅಭಿವೃದ್ಧಿ, ಅತಿವೃಷ್ಟಿ ಪರಿಹಾರ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಕ್ಕೆ ತಿಲಾಂಜಲಿ ಇಟ್ಟಂತಾಗಿದೆ. ಇದರಿಂದ ತಾಲೂಕಿನಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಪ್ರಮುಖವಾಗಿ ಈ ಹಿಂದೆ ತಾಲೂಕಿನಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾವಿರಾರು ರೈತರು ಫಾರಂ ನಂ 50, 53 ಯಲ್ಲಿ ಅರ್ಜಿ ಸಲ್ಲಿಸಿ ಭೂಮಿ ಪಡೆದ್ದರು. ಆದರೆ ಕಾಂಗ್ರೆಸ್ ಸರಕಾರ ಬಂದ ಬಳಿಕ ತಾಲೂಕಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಸಣ್ಣ ರೈತರ ಅರ್ಜಿಗಳನ್ನು ವಜಾಗೊಳಿಸಿ ರೈತರನ್ನು ಬೀದಿಗೆ ಬರುವಂತೆ ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಫಾರಂ ನಂ 50, 53 ಯಲ್ಲಿ ಕೃಷಿ ಮಾಡಿದವರಿಗೆ ಹಕ್ಕುಪತ್ರ ನೀಡಿ ಭೂಮಿ ಕನಸು ನನಸು ಮಾಡಿತ್ತು. ಅಲ್ಲದೇ ಗುತ್ತಿಗೆ ಮೂಲಕ ಭೂಮಿ ನೀಡಲು ಘೋಷಿಸಲಾಗಿತ್ತು. ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಇದುವರೆಗೂ ಅಕ್ರಮ ಸಕ್ರಮ ಸಮಿತಿ ಸಭೆಯನ್ನೇ ನಡೆಸಿಲ್ಲ. ಕಾಡಾನೆ ಹಾವಳಿಗೆ ಪರಿಹಾರ ಸಿಕ್ಕಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇಲ್ಲದೇ ಕತ್ತಲ್ಲಲಿ ಕಳೆಯುವಂತಾಗಿದೆ. ರಸ್ತೆಗಳ ದುರಸ್ತಿ ಕಾರ್ಯವಾಗುತ್ತಿಲ್ಲ. ಇದರಿಂದ ಕಾಂಗ್ರೆಸ್ ಆಡಳಿತದ ಸಹವಾಸವೇ ಬೇಡವೆಂಬ ಸ್ಥಿತಿಗೆ ಜನರು ಬಂದಿದ್ದಾರೆಂದು ಹೇಳಿದ್ದಾರೆ.



