ರಕ್ತದಾನ ಮಾಡುವುದರಿಂದ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಿದಂತಹ ಮತ್ತು ಆ ಮೂಲಕ ಒಂದು ಕುಟುಂಬವನ್ನು ಕಾಪಾಡಿದ ಆತ್ಮಸಂತೋಷ ಮತ್ತು ಪುಣ್ಯ ಲಭಿಸುತ್ತದೆ ಎಂದು ಸಾಹಿತಿ ಹಳೆಕೋಟೆ ರಮೇಶ್ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ, ಪತ್ರಕರ್ತರ ಸಂಘ, ಪೊಲೀಸ್ ಇಲಾಖೆ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ತಂಡದ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತದಾನ ಶ್ರೇಷ್ಟವಾದದ್ದು. ಇದರಿಂದ ಕೇವಲ ಓರ್ವ ವ್ಯಕ್ತಿಯ ಜೀವ ಉಳಿಸುವುದು ಮಾತ್ರವಲ್ಲ. ಆ ವ್ಯಕ್ತಿಯ ಕುಟುಂಬವನ್ನೇ ಕಾಪಾಡಿದಂತಾಗುತ್ತದೆ. ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತ ಹುಡುಕಾಡುವ ಪ್ರಸಂಗ ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ರಕ್ತ ನಿಧಿ ವಿಭಾಗದ ಡಾ.ಮುರುಳಿಧರ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಹಾಗೂ 45ಕ್ಕಿಂದ ಅಧಿಕ ಕೆ.ಜಿ ತೂಕವಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಹಾಗೂ ತೊಂದರೆ ಉಂಟಾಗುವುದಿಲ್ಲ. ಬದಲಾಗಿ ದೇಹದ ಆರೋಗ್ಯ ಸ್ಥಿತಿ ಉತ್ತಮವಾಗುತ್ತದೆ ಎಂದು ಹೇಳಿದರು.


ಶಿಬಿರದಲ್ಲಿ ಒಟ್ಟು 45 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ಚಿಕ್ಕಮಗಳೂರು ಜಿಲ್ಲಾ ರಕ್ತನಿಧಿ ವಿಭಾಗದ ಸಿಬ್ಬಂದಿಗಳು ರಕ್ತ ಸಂಗ್ರಹ ಕಾರ್ಯದಲ್ಲಿ ನೆರವಾದರು. ರಕ್ತದಾನ ಮಾಡಿದವರಿಗೆ ಹಣ್ಣು, ತಂಪು ಪಾನಿಯ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್ ವಹಿಸಿದ್ದರು. ಎಂಜಿಎಂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪ್ರಿಯಾಂಕ, ಎಎಸ್ಐ ವೆಂಕಟೇಶ್, ಪತ್ರಕರ್ತ ಅಮರ್ನಾಥ್, ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ತಂಡದ ಪ್ರವೀಣ್ ಪೂಜಾರಿ, ಸಮಾಜ ಸೇವಕ ಫಿಶ್ಮೋಣು, ಜೇಸಿ ಕಾರ್ಯದರ್ಶಿ ದೀಕ್ಷಿತ್, ಲೇಡಿ ಜೇಸಿ ಕಾರ್ಯದರ್ಶಿ ಶೃತಿ ದೀಕ್ಷಿತ್ ಉಪಸ್ಥಿತರಿದ್ದರು.



