ಸಾಕಾನೆಗಳನ್ನು ನೋಡಲು ದುಬಾರೆ ಆನೆ ಕ್ಯಾಂಪ್ಗೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ದಾಳಿಯಿಂದ ವಾಹನಕ್ಕೆ ಹಾನಿಯಾಗಿದೆ.
ಮಡಿಕೇರಿಗೆ ಭೇಟಿ ನೀಡಿದ್ದ ಬೆಂಗಳೂರಿನ ದಂಪತಿ ದುಬಾರೆ ಆನೆ ಶಿಬಿರದ ಕಡೆಗೆ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಚೆಟ್ಟಳ್ಳಿಯಿಂದ ದುಬಾರೆಗೆ ತೆರಳುತ್ತಿದ್ದಾಗ ಅರಣ್ಯದ ಅಂಚಿನಿಂದ ಏಕಾಏಕಿ ಕಾಡಾನೆಯೊಂದು ಕಾಣಿಸಿಕೊಂಡು ವಾಹನದ ಮೇಲೆ ದಾಳಿ ಮಾಡಿದೆ. ಟ್ಯಾಕ್ಸಿ ಚಾಲಕ ಹಾಗೂ ಪ್ರವಾಸಿಗರು ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ ದಾಳಿಯಲ್ಲಿ ಕಾರು ತೀವ್ರ ಜಖಂಗೊಂಡಿದೆ.
ಘಟನೆಯ ನಂತರ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ.



