ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ಪೋಸ್ಟ್ ನಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ಬುಧವಾರ ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅವರಿಂದ 82,700 ರೂ ನಗದು ಹಣವನ್ನು ಎಫ್ಎಸ್ಟಿ ಚುನಾವಣೆ ಆಯೋಗದ ತಂಡ ವಶಪಡಿಸಿಕೊಂಡಿದೆ.
ಬೆಂಗಳೂರು ಮೂಲದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪಿ.ಎಸ್.ಆಚಾರ್ಯ ಎಂಬುವರು ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಕೊಟ್ಟಿಗೆಹಾರ ಚೆಕ್ಪೋಸ್ಟ್ ನಲ್ಲಿ ನವೀನ್ ನೇತೃತ್ವದ ಎಫ್ಎಸ್ಟಿ ತಂಡ ತಪಾಸಣೆ ನಡೆಸಿದಾಗ ಕಾರಿನಲ್ಲಿ ಸಾಗಿಸುತ್ತಿದ್ದ 82,700 ರೂ ವಶಪಡಿಸಿಕೊಂಡಿದೆ. ಆಗ ಪಿ.ಎಸ್.ಆಚಾರ್ಯ ಅವರು, ತಾನು ಬ್ಯಾಂಕ್ನಿಂದ 1 ಲಕ್ಷ ರೂ ಹಣ ಡ್ರಾ ಮಾಡಿಕೊಂಡು ಮಂಗಳೂರಿಗೆ ತೆರಳುತ್ತಿದ್ದೇನೆ. ಹಣ ಡ್ರಾ ಮಾಡಿರುವ ಬಗ್ಗೆ ತನ್ನಲ್ಲಿ ದಾಖಲೆ ಇದೆ ಎಂದು ಮೊಬೈಲ್ನಲ್ಲಿರುವ ಮಾಹಿತಿ ತೋರಿಸಿದ್ದಾರೆ. ಆದರೆ ಆ ದಾಖಲೆ ಅಸಮರ್ಪಕವಾಗಿದೆ ಎಂದು ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.



