ರಸಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಹೊಕ್ಕಳ್ಳಿ ಗ್ರಾಮದ ಬಳಿ ಗುರುವಾರ ಈ ದುರ್ಘಟನೆ ನಡೆದಿದೆ.
ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸತೀಶ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರಗೋಡು ಗ್ರಾಮದ ಕಾಫಿ ತೋಟವೊಂದಕ್ಕೆ ಬಣಕಲ್ ಸಹಕಾರ ಸಂಘದ ಗೋದಾಮಿನಿಂದ ರಾಸಾಯನಿಕ ಗೊಬ್ಬರ ಕೊಂಡೊಯ್ಯುವಾಗ ಈ ಅವಘಡ ಸಂಭವಿಸಿದೆ.

ಬಣಕಲ್ ನಿಂದ ಸಾರಗೋಡು ಗ್ರಾಮಕ್ಕೆ ಟ್ರಾಕ್ಟರ್ ಹೋಗುತ್ತಿದ್ದ ಸಂದರ್ಭದಲ್ಲಿ ಹೊಕ್ಕಳ್ಳಿ ಸಮೀಪ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿದ ಸಾರಗೋಡು ಗ್ರಾಮದ ಚೋಟುಗದ್ದೆಯ ನಿವಾಸಿ ಸತೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



