ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಅಪಾರ ಹಾನಿ ಸಂಭವಿಸಿದೆ.
ಮಲೆನಾಡಿನಲ್ಲಿ ಅನೇಕ ಕಡೆ ರಸ್ತೆಗಳು, ಕಿರು ಸೇತುವೆಗಳು ಕುಸಿದುಬಿದ್ದಿದ್ದು, ತೋಟಗದ್ದೆಗಳಿಗೆ ನೀರು ನುಗ್ಗಿ ರೈತರಿಗೆ ಅಪಾರ ಹಾನಿ ಸಂಭವಿಸಿದೆ.
ಮೂಡಿಗೆರೆ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಹೇಮಾವತಿ ಮತ್ತು ಅದರ ಉಪನದಿಗಳು ತುಂಬಿ ಹರಿದಿದ್ದು, ಅನೇಕ ಕಡೆ ತೋಟಗಳು ಕೊಚ್ಚಿ ಹೋಗಿವೆ.
ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಪಾರ ಹಾನಿಯಾಗಿದೆ. ನಿರಂತರ ಮಳೆಯಿಂದ ಕಾಫಿ, ಅಡಿಕೆ ಮತ್ತು ಕಾಳುಮೆಣಸು ಫಸಲು ನೆಲಕ್ಕುದಿರಿವೆ. ಭತ್ತದ ಗದ್ದೆಗಳು ಜಲಾವೃತ್ತವಾಗಿದ್ದು, ನಾಟಿ ಮಾಡಲು ಸಾಧ್ಯವಾಗದೇ ರೈತರು ತೊಂದರೆಗೆ ಈಡಾಗಿದ್ದಾರೆ.

ನಿರಂತರ ಮಳೆಯಿಂದ ನಮ್ಮ ತೋಟದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾಫಿ ಫಸಲು ಬಹುತೇಕ ನೆಲಕ್ಕೆ ಉರುಳಿವೆ, ಅಡಿಕೆಗೆ ಸ್ಪ್ರೇ ಮಾಡಲು ಸಾಧ್ಯವಾಗದೇ ಅಡಿಕೆ ಫಸಲು ಕೊಳೆರೋಗಕ್ಕೆ ತುತ್ತಾಗಿ ನೆಲಕ್ಕುರುಳುತ್ತಿವೆ. ರಭಸವಾದ ಗಾಳಿಯಿಂದ ಅಡಿಕೆ ಮರಗಳು ಸಹ ಮುರಿದು ಬಿದ್ದಿವೆ. ತುಂಬಿ ಹರಿದ ತೊರೆಯಿಂದ ತೋಟಕ್ಕೆ ನಿರ್ಮಿಸಿದ್ದ ರಸ್ತೆ ಮತ್ತು ಮೋರಿ ಕೊಚ್ಚಿ ಹೋಗಿವೆ. ತೋಟಕ್ಕೆ ಹೋಗಲು ದಾರಿ ಇಲ್ಲದಂತಾಗಿದೆ. ಇದರಿಂದ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.
ಎಂ.ಎಸ್. ಹರೀಶ್ ಕೊಳಗಾಮೆ
ಕಾಫಿ ಬೆಳೆಗಾರರು, ಹೆಮ್ಮದಿ, ಮೂಡಿಗೆರೆ.

ನಮ್ಮ ಭಾಗದಲ್ಲಿ ಜೂನ್ ಮೊದಲ ವಾರದಿಂದಲೂ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದ ಹೇಮಾವತಿ ಉಪನದಿಗಳು ತೋಟದ ಮೇಲೆ ಉಕ್ಕಿ ಹರಿದಿವೆ. ಇದರಿಂದ ಭೂಕುಸಿತ ಉಂಟಾಗಿ ನೂರಾರು ಕಾಫಿ ಮತ್ತು ಅಡಿಕೆ ಮರಗಳು ಹೊಳೆಯಲ್ಲಿ ಕೊಚ್ಚಿಹೋಗಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
ಎನ್.ಎಸ್.ಚಂದ್ರು ನಿಡುವಾಳೆ
ಕಾಫಿ ಬೆಳೆಗಾರರು, ಮಡ್ಡೀಕೆರೆ, ಮೂಡಿಗೆರೆ



