raitha1

 

 

ಚಿಕ್ಕಮಗಳೂರು ತಾಲ್ಲೂಕಿನ ಕೆಸವಿನ ಮನೆಯಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟ ಸೇರಿದಂತೆ ಇತರೆ ಬೆಳೆಗಳನ್ನು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಸ್ಥಳಾಂತರಿಸಬೇಕು. ಅಧಿಕಾರಿಗಳು ಶೀಘ್ರ ಸ್ಥಳಮಹಜರು ನಡೆಸಿ, ಸೂಕ್ತ ವೈಜ್ಞಾನಿಕ ಪರಿಹಾರ ದೊರಕಿಸಿಕೊಡದಿದ್ದರೆ ಅರಣ್ಯ ಇಲಾಖೆ ಮುಂದೆ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಎಚ್ಚರಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಕೆಸವಿನ ಮನೆ ಬೈರೇಗೌಡ ಎಂಬುವರ ಕಾಫಿತೋಟದಲ್ಲಿ ಆನೆಗಳು ಸಹಸ್ರಾರು ಕಾಫಿ ಗಿಡಗಳನ್ನು ತುಳಿದು, ಬುಡ ಸಮೇತ ಕಿತ್ತುಹಾಕಿವೆ. ಕಾಫಿತೋಟಗಳಿಗೆ ಆನೆಗಳು ನುಗ್ಗಿವೆ ಎಂಬುದನ್ನು ಅರಿತ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ತೋಟದ ಸುತ್ತ ದಿಗ್ಭಂದನ ಹಾಕಿ, ಸೈರನ್ ಮೊಳಗಿಸಿ ಪಟಾಕಿ ಸಿಡಿಸಿದ ಪರಿಣಾಮ ಆನೆಗಳು ತೋಟದಿಂದ ಬೇರೆಕಡೆ ಹೋಗಲು ಸಾಧ್ಯವಾಗಿಲ್ಲ.

ಗಾಬರಿಯಿಂದ ಕಾಫಿಗಿಡಗಳನ್ನು ತುಳಿದು, ಸೊಂಡಿಲಿನಿಂದ ಕಿತ್ತು ಹಾನಿ ಉಂಟುಮಾಡಿವೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯೇ ನೇರ ಹೊಣೆ ಎಂದು ದೂರಿದರು. ಇಲಾಖೆ ಸಿಬ್ಬಂದಿ ಅವೈಜ್ಞಾನಿಕವಾಗಿ ಆನೆಗಳನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ ವಿನಾ ಸ್ವಸ್ಥಾನಕ್ಕೆ ಸೇರಿಸುವ ಕೆಲಸ ಮಾಡುತ್ತಿಲ್ಲ. ಆನೆ ಓಡಿಸಲು ವೈಜ್ಞಾನಿಕ ವಿಧಾನ ಬಳಸುತ್ತಿಲ್ಲ. ಕಂಚೆನಹಳ್ಳಿ ಅರಣ್ಯದಲ್ಲಿ ಆನೆಗಳು ವಾಸ್ತವ್ಯ ಹೂಡಿವೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ತಿಳಿಸಿದರು.

ಹಾಗಾದರೆ ಇಷ್ಟೆಲ್ಲಾ ಹಾನಿಯಾಗಿರುವುದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ ಇನ್ನು 4 ದಿನ ಸಮಯಾವಕಾಶ ಕೊಡುತ್ತೇವೆ. ಅಷ್ಟರಲ್ಲಿ ಆನೆಗಳನ್ನು ಸ್ಥಳಾಂತರಿಸಲು ವೈಜ್ಞಾನಿಕ್ರಮ ಅನುಸರಿಸಬೇಕು. ಬೆಳೆನಷ್ಟ ಹೊಂದಿದ ರೈತ ಬೆಳೆಗಾರರಿಗೆ ನಷ್ಟ ಪರಿಹಾರ ತುಂಬಿಕೊಡಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಮುಂದೆಯೇ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸಂಘದ ಕಾರ್ಯದರ್ಶಿ ಡಿ.ಮಹೇಶ್ ಮಾತನಾಡಿ, ಕಳೆದ ವರ್ಷ ಒಬ್ಬ ಕಾರ್ಮಿಕರನ್ನು ಆನೆ ಬಲಿ ಪಡೆಯಿತು. ಭತ್ತ, ರಾಗಿ, ಜೋಳ ಬೆಳೆಗಳನ್ನು ಸಾಕಷ್ಟು ಹಾನಿ ಮಾಡಿವೆ. ಆದರೆ, ಇಲಾಖೆ ಮೂರು ಕಾಸಿನ ಪರಿಹಾರ ನೀಡಿತು. ಇಲ್ಲೊಬ್ಬರು ಫಾರೆಸ್ಟ್ ರಮೇಶ್ ಎಂಬಾತ ಮನಸ್ಸಿಗೆ ಬಂದಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಉಡಾಫೆ ಉತ್ತರ ಕೊಡುತ್ತಾರೆ. ಹೀಗಾಗಿ ಸ್ವತಃ ಡಿಎಫ್‌ಓ ರಮೇಶ್‌ಬಾಬು ಅವರೇ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಬೇಕು. ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬೆಳೆ ಕಳೆದುಕೊಂಡ ಸಂತ್ರಸ್ಥ ರೈತ ಬೈರೇಗೌಡ ಮಾತನಾಡಿ, ರಾತ್ರಿಯಿಡಿ ಆನೆಗಳನ್ನು ನಮ್ಮ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡಿ ಹಾಕಿದ್ದರ ಪರಿಣಾಮ ತೋಟದಲ್ಲಿ ಭಾರಿ ಹಾನಿಯಾಗಿದೆ ಎಂದು ದೂರಿದರು. ಸಂಘದ ಗೌರವಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ ಮಾತನಾಡಿ, ಬರಿ ಆನೆಗಳಲ್ಲ ಜಿಲ್ಲೆಯಲ್ಲಿ ಕಾಡುಕೋಣ, ಕಾಡುಹಂದಿ, ನವಿಲುಗಳು, ಮಂಗಗಳು ರೈತರ ಬೆಳೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ ಎಂದು ದೂರಿದರು. ಈ ಬಗ್ಗೆ ಅರಣ್ಯ ಇಲಾಖೆಯೇ ಒಂದು ಮಾರ್ಗದರ್ಶನ ಕೊಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಉಮೇಶ್, ಮುಖಂಡರಾದ ದಯಾನಂದ, ಚಂದ್ರೇಗೌಡ, ದುರ್ಗೇಶ್, ಪೂರ್ಣೇಶ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ