ನಮ್ಮ ದೇಶ ಅಭಿವೃದ್ಧಿಯತ್ತ ಸಾಗಬೇಕೆಂದರೆ ಯುವ ಜನತೆಯ ಪರಿಶ್ರಮ ಹಾಗೂ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿಗಳಿಗೆ ಮತದಾನ ಮಾಡಿದಾಗ ಮಾತ್ರ ಸಾಧ್ಯವಿದೆ ಎಂದು ಮೂಡಿಗೆರೆ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಜಯಪ್ರಕಾಶ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲೋಕಸಭೆ ಮತ್ತು ವಿಧಾನಸಭೆಯಂತಹ ದೊಡ್ಡ ಚುನಾವಣೆಯಲ್ಲಿ ಇಲ್ಲಿಯವರೆಗೂ ಶೇ.100 ರಷ್ಟು ಮತದಾನವಾಗಿರುವ ಉದಾಹರಣೆಗಳಿಲ್ಲ. ಇದಕ್ಕೆ ಮೂಲ ಕಾರಣ ತಿಳಿದು ಬಗೆಹರಿಸುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.
18 ವರ್ಷ ಮೇಲ್ಪಟ್ಟವರಲ್ಲಿ ಕೆಲವರು ಮತದಾನ ಮಾಡುವ ಅಂಜಿಕೆ ಇಟ್ಟುಕೊಂಡಿದ್ದರಿಂದ ಅನೇಕ ಮಂದಿ ಚುನಾವಣೆ ಗುರುತಿನ ಚೀಟಿ ಮಾಡಿಸದೇ ಇರುವುದು ಕಂಡು ಬಂದಿದೆ. ಇಂತಹ ಮನೋಭಾವದಿಂದ ಹೊರ ಬರುವಂತೆ ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ಮತದಾನದ ಹಕ್ಕು ಪಡೆಯುವ ಜತೆಗೆ, ಮತ ಚಲಾಯಿಸುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.
ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್, ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್ ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಕ ಬಿ.ಆರ್.ರಮೇಶ್ ಅವರು ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.



