ಕೃಷಿ ಚಟುವಟಿಕೆಗೆ 10ಎಚ್ಪಿ ಒಳಗಿನ ಪಂಪ್ಸೆಟ್ ಮೋಟಾರು ಬಳಕೆಗೆ ಹಿಂದೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು, ಇದೀಗ ಏಕಾ ಏಕಿ ವಿದ್ಯುತ್ ಬಿಲ್ ಕಟ್ಟುವಂತೆ ಸರಕಾರ ರೈತರ ಮೇಲೆ ಒತ್ತಡ ಹಾಕುತ್ತಿರುವ ಕ್ರಮ ಸರಿಯಲ್ಲ ಎಂದು ರೈತ ಸಂಘದ ಮುಖಂಡರು ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿರೆಸ್ತೆದಾರ ಸುರೇಂದ್ರ ಬಾಬು ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆ ವನಶ್ರೀಗೌಡ ಮಾತನಾಡಿ, ಹಿಂದಿನ ಸರಕಾರ 10ಎಚ್ಪಿ ಒಳಗಿನ ವಿದ್ಯುತ್ ಬಳಕೆ ಮಾಡುವ ಕೃಷಿಕರಿಗೆ ಉಚಿತ ವಿದ್ಯುತ್ ಘೋಷಣೆ ಮಾಡಿತ್ತು. ನಂತರ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಈ ನಿಯಮದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಆದರೂ ಕೂಡ ಮೆಸ್ಕಾಂ ಅಧಿಕಾರಿಗಳು 10 ಎಚ್ಪಿ ಒಳಗಿನ ವಿದ್ಯುತ್ ಬಳಕೆದಾರ ರೈತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗುತ್ತಿದ್ದು, ಪದೇ ಪದೆ ನೊಟೀಸ್ ನೀಡಿ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೊದಲೇ ಅತಿವೃಷ್ಟಿ, ಅನಾವೃಷ್ಟಿ, ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರಿಗೆ ಇದೀಗ ವಿದ್ಯುತ್ ಬಿಲ್ ನೀಡುವ ಮೂಲಕ ಮತ್ತಷ್ಟು ಸಂಕಷ್ಟ ಎದುರಿಸುವಂತೆ ಮಾಡಲಾಗಿದೆ ಎಂದು ದೂರಿದರು.

ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿಗೌಡ ಮಾತನಾಡಿ, ವಿದ್ಯುತ್ ಶುಲ್ಕ ಸಂಪೂರ್ಣ ಪಾವತಿಸುವಂತೆ ಸರಕಾರದ ಯಾವುದೇ ಅಧಿಕೃತ ಆದೇಶ ಇಲ್ಲದಿದ್ದರೂ ಕೂಡ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗುತ್ತಿದ್ದಾರೆ. ಇದನ್ನು ತಕ್ಷಣ ತಡೆಹಿಡಿದು ಸಣ್ಣ ರೈತರ ನೆರವಿಗೆ ಸರಕಾರ ಮುಂದಾಗಬೇಕು. ಅಲ್ಲದೇ ಇನ್ನು ಮುಂದೆ ಯಾವುದೇ ಕಾರಣಕ್ಕೂ ರೈತರಿಗೆ ವಿದ್ಯುತ್ ಸಂಪರ್ಕ ವಿಚಾರದಲ್ಲಿ ತೊಂದರೆ ನೀಡದಂತೆ 10ಎಚ್ಪಿ ಒಳಗಿನ ಮೋಟಾರು ಬಳಕೆಗೆ ಉಚಿತ ವಿದ್ಯುತ್ ಪೂರೈಸುವಂತೆ ಮೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಎಚ್.ಎಸ್.ನಾಗೇಶ್ಗೌಡ, ಮಂಜುನಾಥ್ ಗೌಡ ಹೊನ್ನೇಕಲ್, ಎಂ.ಆರ್.ಸಂತೋಷ್, ಎಂ.ಹೆಚ್. ಅಮರನಾಥ್, ಡಿ.ಕೆ.ಲಕ್ಷ್ಮಣ್ಗೌಡ, ಆದರ್ಶ ಕನ್ನಳ್ಳಿ, ಶರತ್ ಬಿ ಹೊಸಳ್ಳಿ, ಎಂ.ಪಿ. ದಿವಾಕರ್, ಅಣ್ಣಪ್ಪಗೌಡ ಕಡಿದಾಳು, ಪ್ರಕಾಶ್ ಬಕ್ಕಿ, ಅಶ್ವಿನ್ ಬಕ್ಕಿ, ಮೀನಾಕ್ಷಮ್ಮ, ವಾಲ್ಟರ್ ಲೋಬೋ, ಸುನೀಲ್ ಮತ್ತಿತರರಿದ್ದರು.



