ಕೆಲವರು ಆರ್ಟಿಐ ಮೂಲಕ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡದೇ ಕ್ಷೇತ್ರದ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅಡಚಣೆ ಮಾಡುವ ಯಾವುದೇ ಶಕ್ತಿಗೆ ನಾನು ಬಗ್ಗುವುದಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಭಾನುವಾರ ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಒತ್ತುವರಿ ಸೇರಿದಂತೆ ನಾನಾ ಸಮಸ್ಯೆಗಳಿವೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ವ್ಯಕ್ತಿಗಳು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಮಾಡುತ್ತಿದ್ದಾರೆ. ಮುಂದಿನ ಅವದಿಯಲ್ಲಿ ತಾನು ಶಾಸಕರಾಗದಿದ್ದರೂ ಸರಿ. ಸರಕಾರಿ ಆಸ್ತಿಯನ್ನು ಯಾರೂ ಒತ್ತುವರಿ ಮಾಡಲು ಬಿಡುವುದಿಲ್ಲ. ಸರಕಾರಿ ಆಸ್ತಿ ಕಾಪಾಡುವುದು ನನ್ನ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಎಲ್ಲಾ ಸಮುದಾಯದ ಹಾಗೂ ಈ ದೇಶದ ದೊಡ್ಡ ಆಸ್ತಿ. ಅಂತಹ ಮಹಾನ್ ವ್ಯಕ್ತಿಯ ಪುತ್ತಳಿಯನ್ನು ಪಟ್ಟಣದಲ್ಲಿ ತನಗರಿವಿಲ್ಲದೇ ಕಾನೂನು ವಿರುದ್ಧ ಕದ್ದು ಮುಚ್ಚಿ ಪ್ರತಿಷ್ಟಾಪಿಸಲು ಹೊರಟಿದ್ದನ್ನು ತಾನು ಸಹಿಸುವುದಿಲ್ಲ. ಅಂತಹ ಮಹಾನ್ ವ್ಯಕ್ತಿಯ ಪುತ್ತಳಿಯನ್ನು ಮುಂದಿನ ದಿನದಲ್ಲಿ ಗೌರವಪೂರ್ವಕವಾಗಿ ಹಾಗೂ ಕಾನೂನು ಬದ್ದವಾಗಿ ಪ್ರತಿಷ್ಟಾಪಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
2019ರಲ್ಲಿ ಪ್ರವಾಹದಲ್ಲಿ ಚನ್ನಡ್ಲು ಗ್ರಾಮದ ನಿರಾಶ್ರಿತರಿಗೆ ಹಾಗೂ ಕಳೆದ 25 ವರ್ಷದಿಂದ ಕುಂದೂರು, ಸಾರಗೂಡು, ಬೈರಗದ್ದೆ ನಿರಾಶ್ರಿತರಿಗೆ ಸಂವಿಧಾನದಡಿಯಲ್ಲಿ ಹಕ್ಕು ಪತ್ರ ನೀಡಿದ್ದು ತನಗೆ ಅತ್ಯಂತ ಸಂತಸ ತಂದಿದೆ. ಆದರೆ ಮದುಗುಂಡಿ ಮತ್ತು ಮಲೆಮನೆ ನಿರಾಶ್ರಿತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿರುವುದು ಬೇಸರವಿದೆ. ಈ ಸಮಸ್ಯೆ ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆಂದ ಅವರು, ಕ್ಷೇತ್ರದಲ್ಲಿ ಹತ್ತಾರು ಅದ್ಭುತವಾದ ಪ್ರವಾಸಿ ತಾಣವಿದೆ. ಅವುಗಳ ಉಪಯೋಗಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ರಾಜಶೇಖರ್ ರಾಷ್ಟçಧ್ವಜಾರೋಹಣ ನೆರವೇರಿಸಿದರು.
ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್, ಉಪಾಧ್ಯಕ್ಷ ರಮೇಶ್, ಸದಸ್ಯರಾದ ಕೆ.ವೆಂಕಟೇಶ್, ಹಂಝಾ, ಕಸಾಪ ಅಧ್ಯಕ್ಷ ಲಕ್ಷö್ಮಣ್ಗೌಡ, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ಗೌಡ, ತಾ.ಪಂ. ಇಒ ದಯಾವತಿ, ಬಿಇಒ ಮೀನಾಕ್ಷಿ, ಪಿಎಸ್ಐ ಶ್ರೀನಾಥ್ರೆಡ್ಡಿ ಮತ್ತಿತರರಿದ್ದರು.



