ಎಲ್ಲಾ ಸರಕಾರಿ ನೌಕರರ ಬದುಕಿನಲ್ಲಿ ವೃತ್ತಿಪರ ಕೆಲಸ, ನೌಕರರ ಹಾಗೂ ಸಾರ್ವಜನಿರ ನಡುವಿನ ಮಧುರವಾದ ಬಾಂಧವ್ಯದ ನೆನಪು. ಇವುಗಳನ್ನು ತೊರೆಯುವ ನಿವೃತ್ತಿಯ ದಿನ ಒಂದೆಡೆ ಸಂಭ್ರಮವೆನಿಸಿದರೆ ಮತ್ತೊಂದೆಡೆ ದುಖಃ ತರುವ ಸನ್ನಿವೇಶವೆಂದು ಮೂಡಿಗೆರೆ ಬಿಇಒ ಎನ್.ಎ.ಮೀನಾಕ್ಷಿ ಹೇಳಿದರು.
ಅವರು ಶಿಕ್ಷಣ ಇಲಾಖೆಯಲ್ಲಿ ಅಧೀಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ರಮಣಿ ಅವರಿಗೆ ಶನಿವಾರ ಸಂಜೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತಿ ಹೊಂದಿದ ಎಸ್.ರಮಣಿ ಅವರು, ಸದಾ ಹಸನ್ಮುಖಿಯಾಗಿ ಇಲಾಖೆಯಲ್ಲಿ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಬೀಳ್ಕೊಡುಗೆ ಎಂಬುದು ಭಾವನಾತ್ಮಕ ಸನ್ನಿವೇಶವಾದರೂ, ನಿವೃತ್ತಿ ಪಡೆದ ಮಾತ್ರಕ್ಕೆ ನಮ್ಮಲ್ಲಿರುವ ಬಾಂಧವ್ಯ ಎಂದಿಗೂ ಕಡಿಮೆಯಾಗದು. ಅವರ ಮುಂದಿನ ಹೊಸ ಪಯಣದ ದಾರಿ ಹಾಗೂ ನಿವೃತ್ತಿ ಜೀವನದಲ್ಲಿ ಭಗವಂತ ಆಯುಷ್ಯು, ಆರೋಗ್ಯ, ನೆಮ್ಮದಿ ನೀಡಲೆಂದು ಶುಭ ಹಾರೈಸಿದರು.
ನಿವೃತ್ತ ಅಧೀಕ್ಷಕಿ ಎಸ್.ರಮಣೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ, ನೌಕರರು ಹಾಗೂ ಸಿಬ್ಬಂದಿ ಸಹಕಾರದಿಂದಾಗಿ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಇದೇ ರೀತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಇಲಾಖೆಗೆ ಒಳ್ಳಯ ಹೆಸರು ತರಬೇಕು. ಜತೆಗೆ ನಿಮ್ಮೆಲ್ಲರ ಬಾಂಧವ್ಯ ಸದಾ ನನ್ನ ಮೇಲಿರಲಿ ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಎಚ್.ಒ.ಕಾವ್ಯ, ಎಚ್.ಮಂಜಪ್ಪ, ಗಂಗಾಧರಪ್ಪ, ಲಿಪಿಕ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದಅಧ್ಯಕ್ಷ ಸೈಯ್ಯದ್ ರಫೀ ಅಂಜುಂ, ಕಾರ್ಯದರ್ಶಿ ಶ್ರೀಕಾಂತ್, ಉಪಾಧ್ಯಕ್ಷ ದೃವರಾಜ್, ಶಿಕ್ಷಣ ಇಲಾಖೆ ಅಧೀಕ್ಷಕ ಎಂ.ಎನ್.ಶಶಿಧರ್, ಟಿಪಿಇಒ ಕೆ.ಬಿ.ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೇಮಂತ್ಚಂದ್ರ, ಇಸಿಒ ಸ್ಮಿತಾ ಲೋಬೋ, ಬಿ ಆರ್ ಸಿ ಸವಿತಾ, ಕ್ಷೇತ್ರ ಸಮನ್ವಯಾಧಿಕಾರಿ ರವಿನಾಯಕ್, ಡಿ.ಸಿ.ಲತಾ, ಲಾರೆನ್ಸ್ ಡಿಸೋಜಾ, ಸಿ.ಎನ್.ಆರತಿ, ಡಿ.ನವೀನ, ಎಂ.ಈತೇಶ್, ಹೇಮಂತ್ಕುಮಾರ್, ಶಾರದಾ, ಡಿ.ಚಂದ್ರಾವತಿ ಮತ್ತಿತರರಿದ್ದರು.



