ಕೆರೆಗೆ ಬಿದ್ದು ಮೇಲೆ ಏಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜಿಂಕೆ ಮರಿಯನ್ನು ಯುವಕರ ತಂಡವೊಂದು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಮರ್ಕಲ್ ಗ್ರಾಮದ ಯುವಕರು ತಮ್ಮ ಗ್ರಾಮದಲ್ಲಿ ಕೆರೆಗೆ ಬಿದ್ದಿದ್ದ ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಮರ್ಕಲ್ ಗ್ರಾಮದಲ್ಲಿ ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದು, ಗಾಬರಿಯಿಂದ ಓಡುವಾಗ ಆಯತಪ್ಪಿ ಕೆರೆಗೆ ಬಿದ್ದಿತ್ತು. ಕೆರೆಗೆ ಬಿದ್ದ ಜಿಂಕೆಯನ್ನು ಸುತ್ತುವರಿದು ನಾಯಿಗಳು ಬೊಗಳುತ್ತಿದ್ದವು. ಇದನ್ನು ಗಮನಿಸಿದ ಮರ್ಕಲ್ ಗ್ರಾಮದ ಪ್ರಶಾಂತ್, ಜೈಪಾಲ್, ಶಶಿ, ಸವಿನ್ ಹಾಗೂ ಹಾಲಪ್ಪ ಎಂಬ ಯುವಕರು ಕೆರೆಗೆ ಇಳಿದು ಜಿಂಕೆಗೆ ಹಗ್ಗ ಕಟ್ಟಿ ನಾಯಿಗಳನ್ನು ಓಡಿಸಿ ಜಿಂಕೆಯನ್ನು ಮೇಲೆ ಎಳೆದು ರಕ್ಷಿಸಿದ್ದಾರೆ.
ಗಾಬರಿಯಿಂದ ಏದುಸಿರು ಬಿಡುತ್ತಿದ್ದ ಜಿಂಕೆಗೆ ಆಹಾರ ನೀಡಿ ಸಂತೈಸಿದ್ದಾರೆ. ಬಳಿಕ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿ ಜಿಂಕೆಯನ್ನು ಕಾಡಿಗೆ ಬಿಡುವಂತೆ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಮರ್ಕಲ್ ಗ್ರಾಮದ ಯುವಕರ ಈ ಕೆಲಸಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.



