ಸರಕಾರದ ಜತೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಿ ಜನಪರವಾದ ಕಾರ್ಯಗಳನ್ನು ಮಾಡಿದಾಗ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಿಸಿದ ಚಿಣ್ಣರ ಕುಟೀರವನ್ನು ಉದ್ಘಾಟಿಸಿ ಮಾತನಾಡಿದರು.

ತಾನು ಶಾಸಕಿಯಾದ ಬಳಿಕ ಮೂಡಿಗೆರೆ ರೋಟರಿ ಸಂಸ್ಥೆ ಪಟ್ಟಣದಲ್ಲಿರುವ ಮುಕ್ತಿದಾಮಕ್ಕೆ ಇಂಟರ್ ಲಾಕ್ ಮಾಡಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅಲ್ಲದೇ ಗೋಣಿಬೀಡು ರೋಟರಿಯವರು ನೂತನ ಪ್ರಯಾಣಿಕರ ಬಸ್ ನಿಲ್ದಾಣ ಸ್ಥಾಪನೆ ಸೇರಿದಂತೆ ಅನೇಕ ಜನಪರವಾದ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದೆ. ಇದರ ಜತೆಗೆ ಮೂಡಿಗೆರೆ ರೋಟರಿಯವರು ಮಕ್ಕಳಿಗೆ ಚಿಣ್ಣರ ಕುಟೀರ ಆರಂಂಬಿಸಿರುವುದು ಶ್ಲಾಘನೀಯ. ಇಂತಹ ಜನಪರ ಸೇವೆ ನಿರಂತರವಾಗಿ ನಡೆಸಬೇಕೆಂದು ಹೇಳಿದರು.
ರೋಟರಿ ಅಧ್ಯಕ್ಷ ರೋಟರಿ ಅಧ್ಯಕ್ಷ ನರೇದ್ರಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಹಿಂದಿನಿಂದಲೂ ಜನರಿಗೆ ಅನುಕೂಲವಾಗುವಂತಹ ಅನೇಕ ವಿಭಿನ್ನವಾದ ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ. ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಾಗುವ ಮಕ್ಕಳು ಮಾನಸಿಕವಾಗಿ ಕುಗ್ಗಬಾರದೆಂಬ ದೃಷ್ಟಿಯಿಂದ ಚಿಣ್ಣರ ಕುಟೀರ ನಿರ್ಮಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ರೋಟರಿ ಸಂಸ್ಥೆ ಮಾಜಿ ಗವರ್ನರ್ ಡಿ.ಎಸ್.ರವಿ, ಮೂಡಿಗೆರೆ ರೋಟರಿ ಕಾರ್ಯದರ್ಶಿ ನವೀನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ. ವೆಂಕಟೇಶ್, ಉಪಾಧ್ಯಕ್ಷ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಹರೀಶ್ಬಾಬು, ಎಂಜಿಎಂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪ್ರಿಯಾಂಕ, ಹಿರಿಯ ವೈದ್ಯರಾದ ಡಾ. ಅನಂತ ಪದ್ಮನಾಭ, ಡಾ.ನಾಗಸಿಂಹ, ದೀಪಕ್ ದೊಡ್ಡಯ್ಯ, ಯತೀಶ್, ದಿನೇಶ್, ಪ್ರದೀಪ್, ತೇಜಸ್ವಿ, ಪ್ರಸಾದ್, ವಿನೋದ್, ಶಂಕರ್ ಚಿಕ್ಕಳ್ಳ, ಜಯಮ್ಮ ಮತ್ತಿತರರಿದ್ದರು.



