ಉದ್ಯೋಗ ಸೃಷ್ಟಿ ಮಾಡುವ ಉದ್ಯಮಿಗಳು ನಮಗೆ ಮಾದರಿಯಾಗಬೇಕು, ಸಮಾಜದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು, ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ನಿಜವಾದ ಸೇವಾ ಕಾರ್ಯವಾಗಿದೆ ಎಂದು ಒಕ್ಕಲಿಗರ ಫಸ್ಟ್ ಸರ್ಕಲ್ ಮುಖ್ಯ ಮಾರ್ಗದರ್ಶಕರು ಮತ್ತು ಐ ಆರ್ ಎಸ್ ಅಧಿಕಾರಿ ಜಯರಾಮ್ ರಾಯಪುರ ತಿಳಿಸಿದರು.
ಅವರು ಶನಿವಾರ ಮೂಡಿಗೆರೆ ಬೆಳೆಗಾರರ ಭವನದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲಾ ಫಸ್ಟ್ ಸರ್ಕಲ್ ಒಕ್ಕಲಿಗ ಉದ್ಯಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಫಸ್ಟ್ ಸರ್ಕಲ್ ಒಕ್ಕಲಿಗ ಉದ್ಯಮಿಗಳು ಮತ್ತು ಉದ್ಯಮಿಗಳಾಗಲೂ ಆಸಕ್ತಿ ಹೊಂದಿರುವವರಿಗೆ ಮಾರ್ಗದರ್ಶನ ನೀಡುವುದು ಮತ್ತು ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದೆ. ಒಕ್ಕಲಿಗ ಸಮುದಾಯದ ಉದ್ಯಮಿಗಳನ್ನು ರಾಜ್ಯದಾದ್ಯಂತ ಒಗ್ಗೂಡಿಸಿ, ಪರಸ್ಪರ ಸಂಪರ್ಕ ಬೆಳೆಸಲು, ವ್ಯವಹಾರ ಅವಕಾಶಗಳನ್ನು ಹಂಚಿಕೊಳ್ಳಲು ಮತ್ತು ಒಬ್ಬರಿಗೊಬ್ಬರು ಬೆಂಬಲ ನೀಡಲು ಸಹಾಯಕವಾದ ವೇದಿಕೆಯಾಗಿದೆ.
ಉದ್ಯಮದಲ್ಲಿ ಸಂವಹನ ಮತ್ತು ಸಂಪರ್ಕ (ಕಮ್ಯುನಿಕೇಷನ್ ಮತ್ತು ನೆಟ್ವರ್ಕ್) ಬಹಳ ಮುಖ್ಯ ಮುಖ್ಯ. ವ್ಯವಹಾರದಲ್ಲಿ ನಾವು ಎಷ್ಟು ಗಂಭೀರವಾಗಿ ತೊಡಗಿಸಿಕೊಳ್ಳುತ್ತೇವೆಯೋ ಅಷ್ಟು ಯಶಸ್ಸು ಸಿಗುತ್ತದೆ. ಉದ್ಯಮಿಯಾಗಿ ಬೆಳೆಯಲು ಸತತ ಪ್ರಯತ್ನ, ತಾಳ್ಮೆ, ಇರಬೇಕು, ದಿನಬೆಳಗಾಗುವುದರೊಳಗೆ ಯಾರೂ ದೊಡ್ಡ ಉದ್ಮಮಿಯಾಗಲು ಸಾಧ್ಯವಿಲ್ಲ. ನಿರಂತರ ಪರಿಶ್ರಮ ಮುಖ್ಯವಾಗುತ್ತದೆ ಎಂದರು. ಉದ್ಯಮದಲ್ಲಿ ಪ್ಯಾಷನ್ ಇರಬೇಕು. ಫಸ್ಟ್ ಸರ್ಕಲ್ ಈಗ ರಾಜ್ಯದ ಅನೇಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸಿ ಹೆಚ್ಚು ಹೆಚ್ಚು ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು ಎಂದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಆರ್. ಮಂಜುನಾಥಗೌಡ ಮಾತನಾಡಿ ; ಫಸ್ಟ್ ಸರ್ಕಲ್ ಮೂಲಕ ಒಕ್ಕಲಿಗ ಉದ್ಯಮಿಗಳನ್ನು ಒಂದೆಡೆ ಸೇರಿಸಿ ಸಂಪರ್ಕ ಸಾಧ್ಯತೆಗಳನ್ನು ವಿಸ್ತರಿಸಲಾಗುತ್ತಿದೆ. ಇದೊಂದು ಉತ್ತಮ ಪ್ರಯತ್ನ, ಯುವ ಉದ್ಯಮಿಗಳು ಇದರ ಸದುಪಯೋಗಪಡೆದುಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಮಗಳೂರು ಫಸ್ಟ್ ಸರ್ಕಲ್ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ, ಡಾ. ವರ್ಷಾ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲಾವತಿ ರಾಜಣ್ಣ, ನಿಯೋಜಿತ ಅಧ್ಯಕ್ಷೆ ನಿರ್ಮಲಾ ಮಂಚೇಗೌಡ, ಫಸ್ಟ್ ಸರ್ಕಲ್, ಶಿವಮೊಗ್ಗ,ಚಿಕ್ಕಮಗಳೂರು ಸಂಯೋಜಕ ಮಧು, ಚಿಕ್ಕಮಗಳೂರು ಕಾರ್ಯದರ್ಶಿ ಪವಿತ್ರಾ ರತೀಶ್ ಹಳೇಕೋಟೆ, ಪ್ರಗತಿಪರ ಕೃಷಿಕ ಗೌತಹಳ್ಳಿ ಲಕ್ಷ್ಮಣಗೌಡ, ಹಸಿರು ಆರ್ಗ್ಯಾನಿಕ್ಸ್ ಅಧ್ಯಕ್ಷ ಅರವಿಂದ ಭೂತನಕಾಡು,ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್ ಕತ್ಲೇಖಾನ್ ಮುಂತಾದವರು ಮಾತನಾಡಿದರು.



