ಅರಣ್ಯ ಇಲಾಖೆಗೆ ಕಂದಾಯ ಭೂಮಿಯಲ್ಲಿ ಗಿಡ ಬೆಳೆಸಲು ಅವಕಾಶ ನೀಡಬಾರದೆಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.
ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಜಿಲ್ಲೆಯಲ್ಲಿ ಇಲ್ಲಿಯೇ ಹುಟ್ಟಿ ಬೆಳೆದ ಲಕ್ಷಾಂತರ ನಿವಾಸಿಗಳು ನಿವೇಶನವಿಲ್ಲದೇ ಪರದಾಡುವಂತಾಗಿದೆ. ಎಷ್ಟೊ ಕುಟುಂಬಗಳು ಕೂಲಿ ಲೈನ್ನಲ್ಲಿಯೇ ಬದುಕುವಂತಾಗಿದೆ. ಈ ಸಮಸ್ಯೆಗೆ ಮೊದಲು ಮುಕ್ತಿ ಕಾಣಬೇಕಾಗಿದೆ. ಇಂತಹ ಹೊತ್ತಲ್ಲಿ ಜಿಲ್ಲಾಡಳಿತ ಕಂದಾಯ ಇಲಾಖೆ ಒಳಪಡುವ ಭೂಮಿಯಲ್ಲಿ ಅರಣ್ಯ ಇಲಾಖೆ ಗಿಡ ನೆಡಲು ಅವಕಾಶ ಮಾಡಿಕೊಡಲು ಮುಂದಾಗಿದೆ. ಅರಣ್ಯ ಇಲಾಖೆ ಈಗ ಗಿಡ ನೆಟ್ಟು ನಾಲ್ಕೈದು ವರ್ಷ ಕಳೆದ ಬಳಿಕ ಈ ಭೂಮಿ ಅರಣ್ಯಕ್ಕೆ ಸೇರಿದ್ದು ಎಂದು ಹೇಳುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಅವಕಾಶ ನೀಡಬಾರದೆಂದು ಹೇಳಿದರು.
ಡೀಮ್ಡ್ ಫಾರೆಸ್ಟ್ನಿಂದಾಗಿ ಈಗಾಗಲೆ ನಿವೇಶನಕ್ಕೆ ಜಾಗ ಗುರುತಿಸಲು ಅಡ್ಡಿ ಉಂಟಾಗುತ್ತಿದೆ. ಈಗ ಅರಣ್ಯ ಇಲಾಖೆಗೆ ಕಂದಾಯ ಭೂಮಿಯಲ್ಲಿ ಗಿಡ ಬೆಳೆಸಲು ಬಿಟ್ಟರೆ ನಿವೇಶನ ಸಮಸ್ಯೆ ಎಂದಿಗೂ ಬಗೆಹರಿಯುವುದಿಲ್ಲ. ಹಾಗಾಗಿ ನಗರ ವ್ಯಾಪ್ತಿಯ 5 ಕಿ,ಮೀ ಒಳಗೆ ಸೇರಿದಂತೆ ಎಲ್ಲಿಯೂ ಕೂಡ ಕಂದಾಯ ಭೂಮಿಯಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೆ ಜಿಲ್ಲಾಡಳಿತ ಅವಕಾಶ ನೀಡಬಾರದು. ಈ ಪ್ರಕ್ರಿಯೆ ಮುಂದುವರೆಸುವುದಾದರೆ ಮೊದಲು ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸಬೇಕು. ಇಲ್ಲವಾದರೆ ಗಿಡ ಹಾಕುವ ಸ್ಥಳದಲ್ಲಿಯೇ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.



