ಮೂಡಿಗೆರೆ ತಾಲೂಕಿನ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟಕ್ಕೆ ಕೊಟ್ಟಿಗೆಹಾರ ಪ್ರೌಢಶಾಲೆಯ ನೇತೃತ್ವದಲ್ಲಿ ಮಲಯಮಾರುತ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಹತ್ತಾರು ಶಾಲೆಗಳು ಸ್ಪರ್ಧಾತ್ಮಕ ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಗೋಪಾಲ್ ಅವರು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ಪ್ರಾಸ್ತಾವಿಕ ನುಡಿಗಳನ್ನು ಆಡಿ, ಜ್ಯೋತಿ ಬೆಳಗಿಸಿ ಮಾತನಾಡಿದರು. ಅವರು “ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಹಾಗೂ ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ದೈಹಿಕ–ಮಾನಸಿಕ ಬಲ ಹೆಚ್ಚುವುದರ ಜೊತೆಗೆ, ರಾಷ್ಟ್ರೀಯ ಮಟ್ಟದ ಸಾಧನೆಗೂ ಅವಕಾಶ ಸಿಗುತ್ತದೆ. ಬದುಕಿನ ಪ್ರತಿಯೊಂದು ಹಂತದಲ್ಲೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರು ಸತೀಶ್ ಗೌಡ, ಸ್ಮಿತಾ, ರಘು,ನಾಮ ನಿರ್ದೇಶಕ ಸಂಜಯ್ ಗೌಡ, ಶಿಕ್ಷಕ ವಿಜಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಮಾತನಾಡಿ ಕ್ರೀಡಾಕೂಟ ಯಶಸ್ವಿಗೆ ಗ್ರಾಮಸ್ಥರು ಹಾಗೂ ದಾನಿಗಳು ನೀಡಿದ ಸಹಕಾರವನ್ನು ಮೆಚ್ಚಿದರು. SDMC ಅಧ್ಯಕ್ಷ ಶರತ್ ಅವರು “ಕ್ರೀಡೆ ಶಿಸ್ತಿನ ಜೀವನಕ್ಕೆ ಮಾರ್ಗದರ್ಶಿಯಾಗಿದೆ” ಎಂದರು.
ಡಾ. ಯುಗೇಂದ್ರ ಭಿನ್ನಡಿ ಅವರು ಜ್ಯೋತಿಯನ್ನು ಕೊಟ್ಟಿಗೆಹಾರ ಶ್ರೀರಾಮ ಮಂದಿರದಿಂದ ಮಸೀದಿ ಮೂಲಕ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಕ್ರೀಡಾಂಗಣದಲ್ಲಿ ಬೆಳಗಿಸಿದರು. ಗೆಳೆಯರ ಬಳಗ ಸಂಘದ ಅಧ್ಯಕ್ಷ ಅಭಿಲಾಷ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್, ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಹಳೆ ವಿದ್ಯಾರ್ಥಿಗಳಾದ ಕಿರಣ್, ಹಸೇನ, ಪ್ರಭಾಕರ್, ಸೋಮಯ್ಯ, ಕೊಟ್ಟಿಗೆಹಾರ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ವೃಂದ, ಗ್ರಾಮಸ್ಥರು ಹಾಜರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕ ಶಿವರಾಮ್ ವಂದನಾರ್ಪಣೆ ಸಲ್ಲಿಸಿದರು.



