ರೈತ ಸಂಘದ ಹೆಸರೇಳಿಕೊಂಡು ಎಂ. ಮಂಜುನಾಥ್ಗೌಡ ಎಂಬುವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಇತರೇ ರೈತರನ್ನು ಬಳಕೆ ಮಾಡಿಕೊಂಡು ಒತ್ತಡ ಹಾಕುವ ಮೂಲಕ ರೈತರ ಹಾಗೂ ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಪಿ.ವಿ.ಪುಟ್ಟಸ್ವಾಮಿಗೌಡ(ವಿಷ್ಣುಗೌಡ ಬಿಳ್ಳೂರು) ಆರೋಪಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ. ಮಂಜುನಾಥಗೌಡ ನೇತೃತ್ವದಲ್ಲಿ ಪೋಡಿ ಮುಕ್ತ ತಾಲೂಕು ಮಾಡಬೇಕೆಂದು ಅಕ್ಟೋಬರ್ 3ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮ ವೈಯುಕ್ತಿಕ ಜಮೀನಿನ ವಿಚಾರ ಪ್ರಸ್ತಾಪಿಸಿ ರೈತ ಸಂಘದ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಕಡಿದಾಳು ಗ್ರಾಮದ ಸರ್ವೆ ನಂ 76/1ಎ ಜಮೀನಿಗೆ ಸಂಬಂಧಿಸಿದ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೆ ಈ ಜಮೀನಿಗೆ ಸಂಬಂಧಪಟ್ಟಂತೆ ವ್ಯಾಜ್ಯ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅಲ್ಲದೇ ನನ್ನ ವಿರುದ್ಧ ಮಂಜುನಾಥಗೌಡ ಅವರು ಮೂಡಿಗೆರೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಈ ದಾವೆಯೂ ಸಹ ಚಾಲ್ತಿಯಲ್ಲಿದೆ. ಆದರೂ ರೈತ ಸಂಘಟನೆ ಹೆಸರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆಂದು ದೂರಿದರು.
ಈ ಜಾಗವು ನಮ್ಮ ಪೂರ್ವಿಕರ ಕಾಲದಿಂದಲೂ ನಮ್ಮದಾಗಿದ್ದು, ನಮ್ಮ ಹೆಸರಿನಲ್ಲಿ ಖಾತೆಯಿದ್ದು, ನಮ್ಮ ಅನುಭವದಲ್ಲಿ ಇರುತ್ತದೆ. 76 ವರ್ಷಗಳ ಹಿಂದೆಯೇ ಈ ಜಾಗದ ಪೋಡು ಕೂಡ ಆಗಿ ಗಡಿಗುರುತು ಮಾಡಿರುತ್ತಾರೆ. ಆದರೆ ಮಂಜುನಾಥಗೌಡ ಅವರು ರೈತ ಸಂಘದ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ನಮ್ಮ ಜಾಗದಲ್ಲಿ ಇದ್ದ ಗಿಡಗಳನ್ನು ಕಡಿದು ಹಾಕಿದ್ದಾರೆ.
ಇವರು ರೈತ ಸಂಘದ ಮುಖಂಡ ಎಂದು ಹೇಳಿಕೊಂಡು ನಿರಂತರವಾಗಿ ಸ್ಥಳೀಯ ರೈತರ ಮೇಲೆ ದಬ್ಬಾಳಿಕೆ ಮಾಡುವುದು, ಅಧಿಕಾರಿಗಳನ್ನು ಹೆದರಿಸುವುದು, ಬ್ಲಾಕ್ ಮೇಲೆ ಮಾಡುವುದು, ಧರಣಿ ಕೂತು ಅಧಿಕಾರಿಗಳನ್ನು ಹೆದರಿಸುವುದು ಮಾಡುತ್ತಿದ್ದಾರೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂದು ಹೇಳಿಕೊಳ್ಳುವ ಇವರು ರೈತರ ಪರವಾಗಿ ಯಾವುದೇ ಹೋರಾಟ ಮಾಡದೇ ತನ್ನ ವೈಯುಕ್ತಿಕ ಹಿತಾಸಕ್ತಿಗಾಗಿಯಷ್ಟೇ ರೈತ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ನಮ್ಮ ಜಮೀನಿಗೆ ಸಂಬಂಧಿಸಿದಂತೆ 76 ವರ್ಷಗಳ ಹಿಂದೆ ಆಗಿದ್ದ ಪೋಡಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರದ್ದುಮಾಡಿಸಿದ್ದು, ಇದರ ವಿರುದ್ಧ ನಾವು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿರುತ್ತೇವೆ. ಈ ಜಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿರುವಾಗ ಅಧಿಕಾರಿಗಳು ಕಡಿದಾಳು ಗ್ರಾಮದ ಸರ್ವೇ ನಂಬರ್ 76/1ಎ ಜಮೀನಿಗೆ ಅಕ್ರಮ ಪ್ರವೇಶ ಮಾಡಬಾರದೆಂದು ಈ ಮೂಲಕ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ.
ಮಂಜುನಾಥಗೌಡ ಅವರು ರೈತರ ಪರವಾಗಿ ಯಾವುದೇ ಹೋರಾಟ ಮಾಡದೇ ತನ್ನ ವೈಯುಕ್ತಿಕ ಹಿತಾಸಕ್ತಿಗಾಗಿಯಷ್ಟೇ ರೈತ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಅಧಿಕಾರಿಗಳು ಅವರ ಒತ್ತಡಕ್ಕೆ ಮಣಿದು ಕಾನೂನು ಬಾಹೀರವಾಗಿ ಜಮೀನು ಪೋಡು ಮಾಡಲು ಮುಂದಾದರೆ ಅದು ನ್ಯಾಯಾಲಯದ ಉಲ್ಲಂಘನೆಯಾಗುತ್ತದೆ. ಮುಂದೆ ಆಗುವ ಕಾನೂನು ಕ್ರಮಗಳಿಗೆ ಅಧಿಕಾರಿಗಳೇ ಜವಾಬ್ದಾರಿಯಾಗುತ್ತಾರೆಂದು ಹೇಳಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಮತ್ತು ಸರ್ವೇ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರೈತರಾದ ಶಾಮಲಾ ಜಗದೀಶ್, ಪಿ.ಕೆ.ಕುಲದೀಪ್, ಮೋಹನ್ ಸಾಲಗೆರೆ, ವಾಸುದೇವ ಸತ್ತಿಗನಹಳ್ಳಿ, ಮೋಹನ್ ಅಚ್ಚೆನಹಳ್ಳಿ, ಎಚ್.ಡಿ.ಅರವಿಂದ್, ಪ್ರವೀಣ್ ಕಲ್ಲುಡ್ಡೆ, ಜೀವನ್ ಉಪ್ಪಳ್ಳಿ, ರತನ್ಕುಮಾರ್ ಕ್ಯಾನಳ್ಳಿ, ಪಾರ್ವತಮ್ಮ ಯಮಸಂದಿ ಉಪಸ್ಥಿತರಿದ್ದರು.



