ಭೀಕರ ಕಾರು ಅಪಘಾತ ; ಚಿಕ್ಕಮಗಳೂರು ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವು
ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಸಿಡಿಎ)ದ ಮಾಜಿ ಅಧ್ಯಕ್ಷ ಚಂದ್ರೇಗೌಡ (60 ವರ್ಷ) ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಂದ್ರೇಗೌಡರ ಪತ್ನಿ ಸರೋಜಮ್ಮ (55) ಹಾಗೂ ಚಂದ್ರೇಗೌಡರ ಅತ್ತೆ ಜಯಮ್ಮ (70) ಮೃತ ದುರ್ದೈವಿಗಳು.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕಾರು ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ತಿರುವಿನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಂದ್ರೇಗೌಡರು, ಅವರ ಪತ್ನಿ ಮತ್ತು ಅತ್ತೆ ಥೈಲ್ಯಾಂಡ್ ಪ್ರವಾಸ ತೆರಳಿದ್ದರು, ಅಲ್ಲಿಂದ ವಾಪಾಸಾಗಿ ಬೆಂಗಳೂರು ಮೂಲಕ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದರು, ಚಂದ್ರೇಗೌಡರು ಸ್ವತಃ ತಾವೇ ಕಾರು ಚಲಾಯಿಸುತ್ತಿದ್ದರು, ಬೆಳ್ಳೂರು ಕ್ರಾಸ್ ಬಳಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಲ್ಲಿ ಓರ್ವರಾದ ಚಂದ್ರೇಗೌಡರು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೇಸ್ ನ ಹಿರಿಯ ಮುಖಂಡರಾಗಿದ್ದರು. ಸಿಡಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು, ಸಹೃದಯಿ ವ್ಯಕ್ತಿತ್ವದವರಾಗಿದ್ದರು. ಚಂದ್ರೇಗೌಡರು ಮತ್ತು ಅವರ ಕುಟುಂಬ ಸದಸ್ಯರ ಸಾವಿಗೆ ಹಲವು ಮುಖಂಡರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.




