ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ), ಬಣಕಲ್, ಕೆ.ವಿ.ಜಿ. ದಂತ ವಿದ್ಯಾಲಯ ಸುಳ್ಯ, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಶ್ರೀ ಡೆಂಟಲ್ ಕ್ಲಿನಿಕ್ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆ ತಾಲೂಕಿನ 40 ಅರ್ಹ ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿ ವಿತರಣೆ ಕಾರ್ಯಕ್ರಮ ಬಣಕಲ್ ಚರ್ಚ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೆ.ವಿ.ಜಿ. ದಂತ ವಿದ್ಯಾಲಯ ಸುಳ್ಯದ ಪ್ರಾಂಶುಪಾಲರಾದ ಶ್ರೀಮತಿ ಡಾ. ಮೋಕ್ಷ ನಾಯಕ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, “ಹಲ್ಲುಗಳ ಸಂರಕ್ಷಣೆ ಮತ್ತು ದಂತ ಆರೋಗ್ಯವು ಮಾನವನ ದೈಹಿಕ ಹಾಗೂ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ಸಂತಸದ ವಿಷಯ” ಎಂದರು. ಈ ಮೂಲಕ ಕುರುಂಜಿ ವೆಂಕಟರಮಣ ಗೌಡರು ಹಾಗೂ ವಿದ್ಯಾಲಯದ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳ ಕುರಿತು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕರಾದ ಫಾದರ್ ಅರುಣ್ ಲೋಬೊ ಮಾತನಾಡಿ, “ಈ ದಿನ 40 ಜನರಿಗೆ ಉಚಿತ ದಂತ ಪಂಕ್ತಿಯನ್ನು ವಿತರಿಸಲಾಗುತ್ತಿದೆ. ಹಲ್ಲುಗಳು ಮಾನವನ ಸೌಂದರ್ಯ ಮಾತ್ರವಲ್ಲ, ಆತ್ಮವಿಶ್ವಾಸಕ್ಕೂ ಕಾರಣವಾಗುತ್ತವೆ. ಮಲೆನಾಡು ಪ್ರದೇಶದಲ್ಲಿ ದಂತ ಚಿಕಿತ್ಸೆ ಅತ್ಯಂತ ಅಗತ್ಯವಾಗಿದ್ದು, ವಯೋವೃದ್ಧರು ಹಾಗೂ ದಂತವನ್ನು ಕಳೆದುಕೊಂಡವರಿಗೆ ದಂತ ಪಂಕ್ತಿ ನೀಡುವುದು ಒಂದು ಉನ್ನತ ಸೇವೆ” ಎಂದರು. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೇಲ್ವಿನ್ ಲಾಸ್ರದೋ ಅವರು ಮಾತನಾಡಿ, “ವಿಮುಕ್ತಿ ಸಂಸ್ಥೆಯಿಂದ ಅನೇಕ ಸಾಮಾಜಿಕ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಸಮಾಜದ ಏಳಿಗೆ ಮತ್ತು ಜನರ ಅನುಕೂಲಕ್ಕಾಗಿ ನಿರಂತರವಾಗಿ ದುಡಿಯುತ್ತಿರುವುದು ಶ್ಲಾಘನೀಯ” ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನವೀನ್ ಅನೆದಿಬ್ಬ, “ಬಡವರು, ದುರ್ಬಲ ವರ್ಗದವರು, ಮಹಿಳೆಯರು ಹಾಗೂ ಮಕ್ಕಳಿಗೆ ವಿಮುಕ್ತಿ ಸಂಸ್ಥೆಯಿಂದ ಅನೇಕ ಪ್ರಯೋಜನಗಳು ದೊರೆತಿವೆ. ಇಂತಹ ಸಂಸ್ಥೆಗಳೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡೆಂಟಲ್ ಕ್ಲಿನಿಕ್ ಉಜಿರೆಯ ವ್ಯವಸ್ಥಾಪಕರಾದ ಡಾ. ದಯಾಕರ್ ಎಂ.ಎಂ. ವಹಿಸಿ ಮಾತನಾಡಿ, “ದಂತ ಪಂಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸುವುದು, ಪ್ರತಿದಿನ ಶುಚಿಗೊಳಿಸುವುದು ಅತ್ಯಗತ್ಯ. ಯಾವುದೇ ಸಮಸ್ಯೆ ಎದುರಾದರೆ ತಕ್ಷಣವೇ ಸಂಪರ್ಕಿಸಿದರೆ ಉಚಿತ ಚಿಕಿತ್ಸೆ ಮತ್ತು ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ. ದಂತ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಹಾಗೂ ಶ್ರೀ ಡೆಂಟಲ್ ಕ್ಲಿನಿಕ್ ಉಜಿರೆಯ ವ್ಯವಸ್ಥಾಪಕರಾದ ಡಾ. ದಯಾಕರ್ ಎಂ.ಎಂ. ಅವರನ್ನು ವಿಮುಕ್ತಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಮುಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಆಥಿಕಾಭಾನು, ಬಣಕಲ್ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಬಿ. ಸುಶೀಲ, ಶ್ರೀ ಕೃಷ್ಣ ಆಸ್ಪತ್ರೆಯ ವ್ಯವಸ್ಥಾಪಕ ಅನಂತ್, ವೈದ್ಯರಾದ ಡಾ. ಸುಮಂತ್ ಅಜ್ಮ, ಫರೀದ್ ಫರೀನ್, ಕೆ.ವಿ.ಜಿ. ದಂತ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸ್ನೇಹಾ, ಪಿಆರ್ಓ ರಕ್ಷಿತ್, ಆಶಾ ಕಾರ್ಯಕರ್ತೆ ಸುನಿತಾ, ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷ ಫ್ರೆಡ್ರಿಕ್, ವಿಮುಕ್ತಿ ಸಂಸ್ಥೆಯ ವಿಂದ್ಯ ಯೋಗೇಶ್, ಬಾಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ ಕೆ.ಆರ್., ಪ್ರಶಾಂತಿ, ಗ್ರಾಮಸ್ಥರು, ಮಹಿಳೆಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.



