ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಅನುಕೂಲ ಆಗದ ಬಜೆಟ್ ಮಂಡಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ದಲಿತ ನಾಯಕ, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಎಸ್ಸಿಪಿ, ಟಿಎಸ್ಪಿಯ 44 ಸಾವಿರ ಕೋಟಿಯನ್ನು ಪಂಚ ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಇದ್ದಂತಹ ಗಂಗಾ ಕಲ್ಯಾಣ, ನೇರ ಸಾಲ ಅವರ ಅವಧಿಯಲ್ಲಿ ಕೊಟ್ಟ ಹಣ ಎಷ್ಟು ದಲಿತ ನಾಯಕರೆಂದು ಇವರು ಕೊಡುತ್ತಿರುವ ಹಣವೆಷ್ಟು, ಇವರಿಗೆ ದಲಿತರ ಮೇಲೆ ಕಾಳಜಿ ಇದ್ದರೆ ಭೂಮಿ ಇಲ್ಲದಿರುವ ದಲಿತರಿಗೆ ನೇರವಾಗಿ ಭೂಮಿಯನ್ನು ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಿ ಎಂದರು.
ದಲಿತ ಸಂಘಟನಾ ಹೋರಾಟಗಾರರು ಯಾರೇ ತಪ್ಪು ಮಾಡಿದರೂ ಅದನ್ನು ಖಂಡಿಸಬೇಕು. ಯಾವುದೇ ಪಕ್ಷದ ನಾಯಕರು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಸ್ವಾಗತಿಸಬೇಕು. ದಲಿತ ನಾಯಕರುಗೆ ಎಂಎಲ್ಸಿ ಮಾಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು, ಅದರಲ್ಲಿ ಅಂಬೇಡ್ಕರ್ ವಾದ ಮಾವಳ್ಳಿ ಶಂಕರ್ ಒಬ್ಬರು ಎಂದು ತಿಳಿಸಿದರು.
ದಲಿತ ಸಮಾಜದ ಸಮುದಾಯಕ್ಕೆ ಅನ್ಯಾಯವಾದರೂ ಕೂಡ ಅವರು ಎಂಎಲ್ಸಿ ಆಗುವ ಸ್ವಾರ್ಥಕ್ಕೆ ದಲಿತರಿಗೆ ಯಾವ ಅನುಕೂಲವಾಗದ ಬಜೆಟ್ ಘೋಷಣೆ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಬಣ ಖಂಡಿಸುತ್ತದೆ ಎಂದರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್, ಕರವೇ ಜಿಲ್ಲಾ ಸಂಚಾಲಕಿ ಪೂರ್ಣಿಮಾ, ಡಿಎಸ್ಎಸ್ ತಾಲ್ಲೂಕು ಸಂಚಾಲಕ ವಿಜಯ್, ಮುಖಂಡ ಸಚಿನ್ ಉಪಸ್ಥಿತರಿದ್ದರು.



