ಮಹಿಳೆಯರು ಸಬಲೀಕರಣಗೊಂಡರೆ ಸಮಾಜ ಸುಸ್ಥಿತಿಯಲ್ಲಿರಲು ಸಾಧ್ಯ, ಮಹಿಳೆಯರು ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಬಣಕಲ್ ಪೊಲೀಸ್ ಠಾಣಾಧಿಕಾರಿ ರೇಣುಕಾ ಹೇಳಿದರು.
ಅವರು ಶನಿವಾರ ಮೂಡಿಗೆರೆ ಜೇಸಿ ಭವನದಲ್ಲಿ ಜೇಸಿಐ ಮೂಡಿಗೆರೆ ಲೇಡಿ ಜೇಸಿ ವಿಭಾಗದಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ. ಆಧುನಿಕ ಸಮಾಜ ಎಷ್ಟೇ ಮುಂದುವರಿದಿದ್ದರು. ಇಂದಿಗೂ ಸಹ ಗ್ರಾಮೀಣ ಪ್ರದೇಶದ ಅನೇಕ ಕಡೆ ಮಹಿಳೆಯರ ಸ್ಥಿತಿ ಸುಧಾರಣೆಯಾಗಿಲ್ಲ. ದಿನನಿತ್ಯ ಒಂದಲ್ಲ ಒಂದು ಕಡೆ ಅತ್ಯಾಚಾರ, ಕೊಲೆ ಮುಂತಾದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಪೊಲೀಸ್ ಇಲಾಖೆ ಮಹಿಳೆಯರ ಸುರಕ್ಷತೆಗಾಗಿಯೇ ವಿಶೇಷವಾದ “ಅಕ್ಕಪಡೆ” ಎಂಬ ಮಹಿಳಾ ಪೊಲೀಸ್ ವಿಭಾಗವನ್ನು ಪ್ರಾರಂಭಿಸಿದೆ. ಮಹಿಳೆಯರು ಯಾವುದೇ ಕಠಿಣ ಸಂದರ್ಭದಲ್ಲಿ ಕರೆ ಮಾಡಿದರೆ ಅಕ್ಕಪಡೆ ಸ್ಥಳಕ್ಕೆ ಧಾವಿಸಿ ಸಹಾಯಕ್ಕೆ ಬರಲಿದೆ ಎಂದರು. ಇಂದು ಸಾಮಾಜಿಕ ಮಾಧ್ಯಮಗಳಿಂದಾಗಿ ಕೌಟುಂಬಿಕ ಕಲಹಗಳು, ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಸಾಮಾಜಿಕ ಮಾಧ್ಯಮಗಳನ್ನು ಜವಾಬ್ದಾರಿಯಿಂದ ಉಪಯೋಗಿಸಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪವಿತ್ರ ಮಾತನಾಡಿ ; ಸರ್ಕಾರದಿಂದ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಯೋಜನೆಗಳಿವೆ, ಮಹಿಳೆಯರು ಮತ್ತು ಮಕ್ಕಳಿಯರಿಗೆ ಯಾವುದೇ ಸಮಸ್ಯೆಗಳಾದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಇದೆ. ಮಹಿಳೆಯರು ಸದಾ ಜಾಗೃತರಾಗಿದ್ದು, ಸಮಾಜದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಡಿ ಜೇಸಿ ವಿಭಾಗದ ಅಧ್ಯಕ್ಷೆ ಸಂದ್ಯಾ ಸುದೀಪ್ ವಹಿಸಿದ್ದರು. ಜೇಸಿಐ ಮೂಡಿಗೆರೆ ಅಧ್ಯಕ್ಷ ಎಂ.ಎಲ್. ಸುನಿಲ್, ಲೇಡಿ ಜೇಸಿ ವಲಯ ಸಂಯೋಜಕಿ ರಮ್ಯಾ ಸಂದೇಶ್, ಲೇಸಿ ಜೇಸಿ ನಿಕಟಪೂರ್ವ ಅಧ್ಯಕ್ಷೆ ರೇಖಾ ನಾಗರಾಜ್, ಲೇಡಿ ಜೇಸಿ ಕಾರ್ಯದರ್ಶಿ ನಿಶ್ಚಿತಾ ಯತೀಶ್, ಕಾರ್ಯಕ್ರಮ ನಿರ್ದೇಶಕಿ ರಾಘವಿ ಧರ್ಮೇಂದ್ರ ಉಪಸ್ಥಿತರಿದ್ದರು.
ಇದೇ ವೇಳೆ ಮಹಿಳೆಯರ ಸಬಲೀಕರಣ ಕುರಿತು ಜಾಥಾ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.



