ಕಳಸ ಬಾಳೆಹೊನ್ನೂರು, ಮೂಡಿಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಿರುಸಾದ ಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ಅನೇಕ ಕಡೆ ಆಲೀಕಲ್ಲು ಮಳೆಯಾಗಿದೆ
ಸಂಜೆಯಾಗುತ್ತಿದ್ದಂತೆ ದಿಢೀರನೆ ಕಾರ್ಮೋಡಗಳು ಕವಿದು ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಮಳೆಯ ತೀವ್ರತೆಗೆ ಪಟ್ಟಣಗಳ ಮುಖ್ಯ ರಸ್ತೆಯಲ್ಲಿ ನೀರು ನದಿಯಂತೆ ಹರಿದು ಕೆಲ ಕಾಲ ಹಳ್ಳದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು ಮತ್ತು ವಾಹನ ಸಂಚಾರವೂ ಸ್ಥಗಿತಗೊಂಡಿತ್ತು.
ಜೋರಾಗಿ ಬೀಸಿದ ಗಾಳಿಯಿಂದಾಗಿ ಕಳಸ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾವೊಂದರ ಮೇಲೆ ತೆಂಗಿನಕಾಯಿಯ ಗೊಂಚಲು ಬಿದ್ದ ಪರಿಣಾಮ ಆಟೋ ಜಖಂಗೊಂಡಿದೆ.

ಕಳಸ-ಕುದುರೆಮುಖ ಮುಖ್ಯ ರಸ್ತೆಯಲ್ಲಿ ಮಾಗುಂಡಿ ಸಮೀಪ ಭಾರಿ ಗಾಳಿಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಗಾಳಿ ಮಳೆಯ ತೀವೃತೆಯಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು.
ಅನೇಕ ಕಡೆ ಆಲಿಕಲ್ಲು ಮಳೆಯಾಗಿದ್ದು ಇದರಿಂದ ಕಾಫಿ ಅಡಿಕೆ ಬಾಳೆ ಕಾಳುಮೆಣಸು ಮುಂತಾದ ಬೆಳೆಗಳಿಗೆ ತೀವ್ರ ಹಾನಿಯಾಗಿದೆ
ಸಂಜೆ ಸುರಿದ ಈ ಅನಿರೀಕ್ಷಿತ ಮಳೆಯಿಂದಾಗಿ ಮಲೆನಾಡಿನ ಹಲವೆಡೆ ಜನಜೀವನ ಸಂಪೂರ್ಣ ಏರುಪೇರಾಗಿತ್ತು.



