ಡಿಎಪಿ ಮತ್ತು ಯೂರಿಯಾ ರಸಗೊಬ್ಬರ ಜೊತೆಗೆ ಒತ್ತಾಯಪೂರ್ವಕವಾಗಿ ಬೇರೆ ಉತ್ಪಾದನೆಗಳನ್ನು ಲಿಂಕ್ ಮಾಡುವುದನ್ನು ನಿಲ್ಲಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಏಪ್ರಿಲ್ 27 ರಂದು ಸೋಮವಾರ ರಾಜ್ಯಾದ್ಯಂತ ನಡೆಯುತ್ತಿರುವ ಬಂದ್ ಗೆ ಬೆಂಬಲ ಸೂಚಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ರಸಗೊಬ್ಬರ ವಹಿವಾಟು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಕೆ.ಆರ್ ಯೋಗೀಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು ಎಲ್ಲಾ ರಸಗೊಬ್ಬರದ ನಿಗದಿತ ದರದ ಮೇಲೆ ಶೇ 8 ರಷ್ಟು ಡೀಲರ್ ಲಾಂಭಾಂಶ ಇರುವಂತೆ ನೋಡಿಕೊಳ್ಳಬೇಕು, ಎಲ್ಲಾ ರಸಗೊಬ್ಬರಗಳನ್ನು ಎಫ್.ಓ.ಎಲ್ ಕೊಡುವಂತೆ ಕ್ರಮ ವಹಿಸಬೇಕು. ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಸ್ಯಾಂಪಲ್ ಹಣಗಳನ್ನು ಕಡ್ಡಾಯವಾಗಿ ವಿತರಕರಿಗೆ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.
ಅಧಿಕಾರಿಗಳು ತಪಾಸಣೆಗಾಗಿ ಅಂಗಡಿಗೆ ಬೇಟಿಕೊಟ್ಟ ನಂತರ ಮಾಧ್ಯಮಕ್ಕೆ ಹೇಳಿಕೆ ಕೊಡುವ ಸಂದರ್ಭದಲ್ಲಿ ದಾಳಿ ಎನ್ನುವ ಬದಲು ತಪಾಸಣೆ ಎಂಬ ಪದ ಬಳಸಬೇಕು, ಜೊತೆಗೆ ಅಂಗಡಿಗಳ ಫೋಟೋ ಬಳಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಎಫ್.ಐ.ಡಿ ಮೂಲಕ ರಸಗೋಬ್ಬರ ಮಾರಾಟ ಮಾಡಬೇಕೆಂಬ ಆದೇಶವನ್ನು ಸ್ವಾಗತಿಸುತ್ತೇವೆ ಅದೇರೀತಿ ನೀರಾವರಿ ಮತ್ತು ಒಣ ಬೇಸಾಯಕ್ಕೆ ಸಂಬಂಧಿಸಿದ ರೈತರಿಗೆ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ಸರಬರಾಜು ಮಾಡಲು ಕ್ರಮ ವಹಿಸಬೇಕು, ಎಫ್.ಐ.ಡಿ ಮೂಲಕ ಡಿಎಪಿ ಹಾಗೂ ಯೂರಿಯಾ ಮಾರಾಟ ಮಾಡುವುದನ್ನು ಹಿಂಗಾರು ಬೆಳೆವರೆಗೆ ಕಡ್ಡಾಯಗೊಳಿಸಬಾರದು, ಬಿತ್ತನೆ ಬೀಜ ಮಾರಾಟ ಚಿಠಿಠಿ ನ್ನು ಮಾರಾಟ ಸ್ನೇಹಿಯಾಗಿ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಮಾರಾಟಗಾರರು ಈ ರಾಷ್ಟ್ರವ್ಯಾಪಿ ಬಂದ್ ಕರೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸಹಕಾರ ನೀಡಬೇಕೆಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಉದಯ್ ಪೈ, ಟಿ.ಡಿ ತಿಮ್ಮಯ್ಯ, ಖಜಾಂಚಿ ಶ್ರೀಕಾಂತ್ ಶೆಟ್ಟಿ, ಸಹ ಕಾರ್ಯದರ್ಶಿ ಆನಂದ ಮೋಹನ್ ಉಪಸ್ಥಿತರಿದ್ದರು.



