ಕಳಸ ಕೆಳಂಗಡಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಪಾಶ್ರ್ವನಾಥ ಸ್ವಾಮಿಯ ಪ್ರಥಮ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಿಮಾನಶುದ್ಧಿ 108 ಕಲಶ ಮಹಾಭಿಷೇಕ, ಮೃತ್ಯಂಜಯ ಆರಾಧನೆ, ಆಶ್ಲೇಷ ಬಲಿ, ಜ್ವಾಲಾಮಾಲಿನಿ ಆರಾಧನೆ, ಕ್ಷೇತ್ರಪಾಲ ಆರಾಧನೆ ನಡೆಯಿತು.
ಶ್ರೀ ಪಾಶ್ರ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಮಾನಶುದ್ಧಿ24 ಕಲಶ ಮಹಾಭಿಷೇಕ, ಕಲಿಕುಂಡ ಯಂತ್ರಾರಾಧನೆ, ಶ್ರೀ ಪದ್ಮಾವತಿ ದೇವಿ ಆರಾಧನೆ ನಡೆಯಿತು.
ಸಂಜೆ ಜೋಡಿ ಪಲ್ಲಕಿ ಉತ್ಸವ ಧರ್ಮದೇವತೆಗಳ ಸನ್ನಿಧಿಯಲ್ಲಿ ಗಗರ ಸೇವೆ ನಡೆಯಿತು.
ವಾರ್ಷಿಕ ಪೂಜಾ ಮಹೋತ್ಸದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಚಂದ್ರನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿ 10 ಕೋಟಿಗೂ ಅಧಿಕ ವೆಚ್ಚದ ಶಿಲಾಮಯ ಬಸದಿಯ ನಿರ್ಮಾಣಕ್ಕೆ ಕಾರಣ ಕರ್ತರಾದ ಕೆ.ಸಿ.ಧರಣೇಂದ್ರಯ್ಯ ಅವರಿಗೆ ಸರ್ವೋದಯ ಜೈನ ತೀರ್ಥ ಸಮಿತಿ ವತಿಯಿಂದ ಧರ್ಮರತ್ನಾಕರ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ವೇಗದ ನಡಿಗೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿದಿಸಿದ್ದ ವಿಧುಷಾ ಜೈನ್, ಹಾಗೂ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜೈನ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಸಿ.ಧರಣೇಂದ್ರಯ್ಯ 10ಕೋಟಿಗೂ ಅಧಿಕ ವೆಚ್ಚದ ಬಸದಿ ನಿರ್ಮಾಣದಲ್ಲಿ ಜೈನ ಸಮುದಾಯದ ಪ್ರತಿಯೊಬ್ಬರ ಸಹಕಾರ ಕೂಡ ಇದೆ.ಎಲ್ಲರ ಸಹಕಾರ ಮತ್ತು ನಿಷ್ಠೆಯ ಕೆಲಸದಿಂದ ಅಚ್ಚುಕಟ್ಟಾದ ಶಿಲಾಮಯ ಬಸದಿ ನಿರ್ಮಾಣ ಸಾಧ್ಯವಾಗಿದೆ.ಆದ್ದರಿಂದ ನನಗೆ ನೀಡಿದ ಗೌರವ ಸಮುದಾಯದ ಎಲ್ಲರಿಗೂ ಸಲ್ಲುತ್ತದೆ.ಇನ್ನು ಕೆಲ ಕೆಲಸಗಳು ಬಾಕಿ ಇರುವುದರಿಂದ ಈ ಕೆಲಸಕ್ಕೂ ಕೂಡ ಸಮುದಾಯದ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸವೋದಯ ತೀರ್ಥಸಮಿತಿ ಅಧ್ಯಕ್ಷರಾದ ಭೋಜರಾಜ್ ಬರ್ಗಲ್,ಉಪಾಧ್ಯಕ್ಷ ಅನಿಲ್ ಕುಮಾರ್ ಕಾರ್ಯದರ್ಶಿ ವಿನಯ್, ಸಹ ಕಾರ್ಯದರ್ಶಿ ಅನಿಲ್, ಖಜಾಂಚಿ ಧರಣೇಂದ್ರ ಹೆಬ್ಳೂರು, ಕೆ.ಸಿ ವಿಜಯ ಕುಮಾರ್, ಸುರೇಶ್ ಕುಮಾರ್, ಹರ್ಷೇಂದ್ರ, ಸುದರ್ಶನ್, ಪ್ರಸಿದ್ದ ಜೈನ್, ಅಜಿತ್ ಕುಮಾರ್, ಜಿತೇಂದ್ರ, ಸುಜಿತ್ ಬರ್ಗಲ್, ಭರತ್ರಾಜ್, ಅಜಿತ್ ಪ್ರಸಾದ್ ಇತರರು ಇದ್ದರು.



