ಮೂಡಿಗೆರೆ ತಾಲ್ಲೂಕಿನ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಣಿಕೆರೆ ಗ್ರಾಮದಲ್ಲಿ ಕೆಲ ಸಂಘಟಕರು ವಸತಿರಹಿತರಿಗೆ ನಿವೇಶನ ದೊರಕಿಸಿ ಕೊಡುವ ದೃಷ್ಟಿಯಿಂದ ಗುಡಿಸಲು ನಿರ್ಮಿಸಿಕೊಂಡು ಕಳೆದ 10 ದಿನದಿಂದ ಧರಣಿ ನಡೆಸುತ್ತಿದ್ದು, ಫಲಾನುಭವಿಗಳ ಆಯ್ಕೆಯನ್ನು ಕಾನೂನು ರೀತಿಯಲ್ಲಿ ತಾಲೂಕು ಆಡಳಿತ ಪಾರದರ್ಶವಾಗಿ ನಡೆಸಬೇಕೆಂದು ಸ್ಥಳೀಯ ಗ್ರಾಮಸ್ಥ, ಯುವ ಮುಖಂಡ ಸುನೀಲ್ ಮಣ್ಣಿಕೆರೆ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಣ್ಣಿಕೆರೆ ಗ್ರಾಮದ ಸರ್ವೆ ನಂಬರ್ 144ರಲ್ಲಿ 3 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಈ ಜಾಗವನ್ನು ನಿವೇಶನಕ್ಕೆ ಕಾಯ್ದಿರಸಬೇಕು ಎಂದು ಮಣ್ಣಿಕೆರೆ ಗ್ರಾಮಸ್ಥರೇ ಒತ್ತಾಯಿಸಿ, ಜಾಗವನ್ನು ಕಾಯ್ದಿರಿಸಲು ಬೆಂಬಲ ನೀಡಿದ್ದರು. 2024ರವರೆಗೆ ಜಾಗದ ವಿಚಾರದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮತ್ತು ತಾಲ್ಲೂಕು ಆಡಳಿತದ ನಡುವೆ ಕಾನೂನು ಹೋರಾಟ ನಡೆಯುತ್ತಿದ್ದರಿಂದ ತಾಲೂಕು ಆಡಳಿತ ನಿವೇಶನ ಹಂಚಿಕೆ ಮಾಡಿರಲಿಲ್ಲ. ಇದೀಗ ಕೆಲ ಸಂಘಟನೆ ಮೂಲಕ ಸುಮಾರು 150ಕ್ಕೂ ಅಧಿಕ ಸಂಖ್ಯೆಯಲ್ಲಿ ನಿವೇಶನ ರಹಿತರು ಎಂದು ಟೆಂಟ್ ನಿರ್ಮಿಸಿ ಧರಣಿ ನಡೆಸುತ್ತಿದ್ದಾರೆ. ಅಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿ ಮೊದಲು ಸ್ಥಳೀಯ ನಿರಾಶ್ರಿತರಿಗೆ ನಿವೇಶನ ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥ ಅವಿನಾಶ್ ಮಾತನಾಡಿ, ಮುಂದಿನ ಗ್ರಾ.ಪಂ. ಚುನಾವಣೆ ಎದುರಿಸುವ ಸಲುವಾಗಿ ಕೆಲವರು ಮಣ್ಣಿಕೆರೆ ಗ್ರಾಮದ ನಿವೇಶನ ರಹಿತರ ದಾರಿ ತಪ್ಪಿಸಿ ಧರಣಿ ನಡೆಸಲು ಮುಂದಾಗಿದ್ದಾರೆ. ಇದನ್ನು ನಿವೇಶನ ರಹಿತರು ಅರ್ಥ ಮಾಡಿಕೊಳ್ಳಬೇಕು. ಸಂಘಟನೆ ಮೂಲಕ ನೀಡಿರುವ ಪಟ್ಟಿಯನ್ನು ಅಧಿಕಾರಿಗಳು ಪರಿಶೀಲಿಸಿ, ಅಲ್ಲಿ ಸ್ಥಳೀಯ ಹಾಗೂ ಅರ್ಹರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಭಜರಂಗದಳದ ಮುಖಂಡ ಸಂತೋಷ್ ಮಾತನಾಡಿ, ಧರಣಿಯಲ್ಲಿ ಕೆಲ ಯುಟ್ಯೂಬ್ ಚಾನಲ್ ಅವರು ಆರ್ ಎಸ್ ಎಸ್, ಭಜರಂಗದಳ ಹೆಸರನ್ನು ಎಳೆದು ತರುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ತಕ್ಕ ಉತ್ತರ ನೀಡಲಾಗುವುದು, ಸರ್ಕಾರ ಅರ್ಹ ಸ್ಥಳೀಯ ನಿವೇಶನ ರಹಿತರಿಗೆ ಆದ್ಯತೆಯ ಮೇಲೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.



