ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್ ಟಿ ಓ) ನಡೆಯುತ್ತಿರುವ ಸಿಬ್ಬಂದಿಗಳ ಅನುಚಿತ ವರ್ತನೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ ಎಂದು ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ.ಆರ್ ಅನಿಲ್ಕುಮಾರ್ ಸಾರ್ವಜನಿಕರ ಕೆಲಸಗಳಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ 3-4 ದಿನದಲ್ಲಿ ಚಾಲನಾ ಪರವಾನಗಿ, ಆರ್ಸಿ ಮುದ್ರಣಗೊಂಡು ಸಾರಿಗೆ ಕಚೇರಿಗೆ ತಲುಪಿದರು ನಿಗದಿತ ಸಮಯಕ್ಕೆ ಈ ದಾಖಲೆಗಳನ್ನು ಅಧಿಕಾರಿ ಸಿಬ್ಬಂದಿಗಳು ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾರಿಗೆ ಕಚೇರಿ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಾಗಲಿ, ಸ್ಪಂದಿಸುವುದಾಗಲಿ ಮಾಡುತ್ತಿಲ್ಲ, ಸಾರಿಗೆ ಸಚಿವರು ಕೂಡಲೇ ಗಮನಹರಿಸಿ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸಮಸ್ಯೆ ಮರುಕಳಿಸದಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಾರಿಗೆ ಕಛೇರಿಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ, ಇದರಿಂದಾಗಿ ಸಾರಿಗೆ ಕಚೇರಿಗೆ ಕೆಟ್ಟ ಹೆಸರು ಬರುತಿದ್ದು ತಕ್ಷಣ ಪರಿಶೀಲಿಸಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕಚೇರಿಯಿಂದ ಹೊರ ಹಾಕಬೇಕು ಎಂದು ಆಗ್ರಯಿಸಿದರು.
ಹೋಂ ಗಾರ್ಡ್ ಕೆಲಸಕ್ಕೆ ಸಾರಿಗೆ ಕಚೇರಿಗೆ ಕರ್ತವ್ಯಕ್ಕೆ ಬಂದ ಕೆಲವು ದಿನಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ, ಅಂತವರನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮೋಟಾರ್ ವಾಹನ ನಿರೀಕ್ಷಕರ ಕೊಠಡಿಗೆ ಸರ್ಕಾರ ನಿಗದಿಪಡಿಸಿದ ಸಮಯದಂತೆ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಒಬ್ಬ ಸರ್ಕಾರಿ ನೌಕರರನ್ನು ಜಾರಿಗೆ ಬರುವಂತೆ ತಕ್ಷಣ ನಿಯೋಜನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವ್ಯಕ್ತಿಯೋರ್ವರು ಡಿಎಲ್, ಎಲ್ಎಲ್ಆರ್ ಮುಂತಾದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದು, ಈ ವ್ಯಕ್ತಿ ಇಲಾಖೆ ಸಮಯದಂತೆ ಬೆಳಿಗ್ಗೆ 10 ರಿಂದ 2.30 ರ ವರೆಗೆ ಖಜಾನೆ ಸಮಯ ಮುಗಿಯುವ ವರೆಗು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆದೇಶಿಸಬೇಕೆಂದು ಸಂಘದ ಪರವಾಗಿ ವಿನಂತಿಸಿದರು.
ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ಸಿ.ಎಮ್.ವಿ.ಕೆ.ಎಮ್.ವಿ ಕಾಯ್ದೆಯನ್ವಯ ಸಾರಿಗೆ ಅದಾಲತನ್ನು ಸಾರಿಗೆ ಆವರಣ ಕಛೇರಿಯಲ್ಲೇ ನೆಡೆಸುವಂತೆ ಒತ್ತಾಯಿಸಿದ್ದಾರೆ.
ಸಂಘದ ಅಧ್ಯಕ್ಷರಾದ ಮಂಜುನಾಥ್ ದಂಟರಮುಕ್ಕಿ, ಗೌರವಾಧ್ಯಕ್ಷರಾದ ನೂರೂಲ್ಲಾ ಖಾನ್ ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸಂಘದ ಉಪಾಧ್ಯಕ್ಷ ತೀರ್ಥಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿ ಇನಾಯತ್ ಖಾನ್, ಖಜಾಂಚಿಗಳಾದ ಹೇಮಂತ್ ಕುಮಾರ್, ಜಯಲಕ್ಷ್ಮೀ ಉಪಸ್ಥಿತರಿದ್ದರು.



