ಕಡೂರು ಕ್ಷೇತ್ರದ ಮಾಜಿ ಶಾಸಕರಾದ ವೈ.ಎಸ್.ವಿ. ದತ್ತಾ (ದತ್ತಣ್ಣ) ಅವರು ಶುಕ್ರವಾರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ತೀವ್ರ ಬರ ಅಧ್ಯಯನ ಪ್ರವಾಸ ಕೈಗೊಂಡು, ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು.
ತಮ್ಮ ಪ್ರವಾಸದ ಭಾಗವಾಗಿ ಅವರು ಕ್ಷೇತ್ರದ ಗುಡ್ಡೆಹಳ್ಳಿ, ಅಂತರಗಟ್ಟೆ, ಕಲ್ಕೆರೆ ಮತ್ತು ವಕ್ಕಲಗೆರೆ ಗ್ರಾಮಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಗಳ ಪ್ರಮುಖ ಕೆರೆಗಳನ್ನು ವೀಕ್ಷಿಸಿದ ಅವರು, ನೀರಿನ ಲಭ್ಯತೆ ಮತ್ತು ಅಂತರ್ಜಲ ಕುಸಿತದ ಬಗ್ಗೆ ಮಾಹಿತಿ ಪಡೆದರು.
ಬಳಿಕ ಸ್ಥಳೀಯ ಅಡಿಕೆ ಹಾಗೂ ತೆಂಗಿನ ತೋಟಗಳಿಗೆ ಭೇಟಿ ನೀಡಿ, ನೀರಿನ ಅಭಾವದಿಂದ ಒಣಗುತ್ತಿರುವ ಬೆಳೆಗಳನ್ನು ಪರಿಶೀಲಿಸಿದರು. ತೋಟಗಳಲ್ಲೇ ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ದತ್ತಣ್ಣ ಅವರು, ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡರಾದ ಹರ್ಷಿತ್ ಕಡೂರು ಹಾಗೂ ಮಚ್ಚೇರಿ ಮಂಜು ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ನೂರಾರು ರೈತರು ಉಪಸ್ಥಿತರಿದ್ದರು.


