ಮರಿಗಳ ಜೊತೆ ಇರುವ ಕಾಡಾನೆಗಳ ಗುಂಪು ಸುಮಾರು 8 ಎಕರೆ ಪ್ರದೇಶದ ಕಾಫಿ ಮತ್ತು ಅಡಿಕೆ ತೋಟವನ್ನು ನಾಶಪಡಿಸಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೀಕನಹಳ್ಳಿಯ ಜಗನ್ನಾಥ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಸ್ವಾಮಿ ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು, ಕಾಡಾನೆಗಳ ಹಿಂಡು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿದೆ. ಈ ಪರಿಣಾಮ ಮಾಲೀಕರಿಗೆ ಸುಮಾರು 6 ಲಕ್ಷ ರೂ.ಗೂ ಅಧಿಕ ನಷ್ಟವುಂಟಾಗಿದೆ.
ಮರಿಗಳು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲೇ ಬೀಡುಬಿಟ್ಟಿದೆ. ಮರಿಗಳು ಇರುವುದರಿಂದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಪಟಾಕಿ ಸಿಡಿಸಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ಪಟಾಕಿ ಸಿಡಿಸಿದರೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.
ಈ ಭಾಗದಲ್ಲಿ ಕಳೇದ ಅನೇಕ ತಿಂಗಳುಗಳಿಂದ ಕಾಡಾನೆಗಳ ಗುಂಪು ಬೀಡುಬಿಟ್ಟಿದ್ದು, ಬೇಲೂರು, ಮೂಡಿಗೆರೆ ಗಡಿಭಾಗದ ಗ್ರಾಮಗಳಲ್ಲಿ ನಿರಂತರ ಹಾನಿ ಉಂಟುಮಾಡುತ್ತಿವೆ. ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ಅಪಾರ ಹಾನಿ ಉಂಟುಮಾಡುತ್ತಿವೆ.


