ಹೋಂಸ್ಟೇಗಳಲ್ಲಿ ಸಾರ್ವಜನಿಕ ಭದ್ರತೆ, ನೈರ್ಮಲ್ಯವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಹಾಗೂ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆಯ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಹೇಳಿದರು.
ಚಿಕ್ಕಮಗಳೂರು ನಗರದ ಎಐಟಿ ವೃತ್ತ ಸಮೀಪದ ಒಕ್ಕಲಿಗರ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೋಂಸ್ಟೇಗಳು ಕಾನೂನಿನ ಅನುಮತಿ ಪಡೆದುಕೊಳ್ಳುವ ಮುಖೇನಾ ವ್ಯಾಪಾರವನ್ನು ನಡೆಸಬೇಕು. ಕೆಲವು ಹೋಂಸ್ಟೇ ಅನುಮತಿ ಪಡೆಯದೇ, ಅಕ್ರಮ ದಂಧೆಯಲ್ಲಿ ತೊಡಗುವವರಿಂದ ಪ್ರಾಮಾಣಿಕವಾಗಿ ನಡೆಸುವ ಹೊಂಸ್ಟೆಗಳಿಗೆ ಬಿಸಿ ತಟ್ಟುತ್ತದೆ. ಪರಿಣಾಮ ಸರಿಯಾಗಿ ಪರಿಶಿಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕಾಫಿ ತೋಟದ ಜೊತೆಗೆ ಉಪ ಕಸಬಾಗಿ ಬೆಳೆಗಾರರು ಹೋಂಸ್ಟೇ ವೃತ್ತಿಯನ್ನು ಅವಲಂಬಿಸಿದ್ದಾರೆ. ಆದರೆ, ಕೆಲವು ಅನಧಿಕೃತ ಹೋಂಸ್ಟೇ ತಪ್ಪಿನಿಂದ ಬಹುತೇಕ ಪ್ರಾಮಾಣಿಕ ಹೋಂಸ್ಟೇಗಳಿಗೆ ಅಧಿಕಾರಿಗಳು ತಪಾಸಣೆ ಹೆಸರಿನಲ್ಲಿ ತೊಂದರೆ ನೀಡಬಾರದು. ಈ ಸಮಸ್ಯೆ ಪರಿಹರಿಸಲು ಪ್ರವಾಸೋದ್ಯಮ ಸಚಿವರು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒತ್ತು ನೀಡುತ್ತಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ನೈಸರ್ಗಿಕ ಪರಿಸರ ಹಾಗೂ ಕಾಡನ್ನು ನಾಶಗೊಳಿಸದೇ ರೂಪ್ ವೇ ನಿರ್ಮಿಸಲು ತೀರ್ಮಾನಿಸಿದೆ. ಇದು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಮೆರಗು ಹೆಚ್ಚಿಸಲಿದೆ ಎಂದು ಹೇಳಿದರು.
ಹೊಂಸ್ಟೇ ಉದ್ಯಮ ಮೊದಲ ಬಾರಿ ಮಡಿಕೇರಿಯ ಜಿಲ್ಲೆಯಲ್ಲಿ ಆರಂಭಗೊಂಡಿತು. ಕಾಲಕ್ರಮೇಣ ಚಿಕ್ಕಮಗಳೂರು, ಜಿಲ್ಲೆಗಳಲ್ಲಿ ಬೆಳವಣಿಗೆ ಹೊಂದಿದೆ, ಆರಂಭದ ಸಂದರ್ಭದಲ್ಲಿ ಕೇವಲ ಒಂದು ಕೊಠಡಿ, ಮಲೆನಾಡಿನ ಶೈಲಿನ ಊಟೋಪಚಾರದ
ಅತಿಥಿ ದೇವೋಭವ ವ್ಯವಸ್ಥೆಯಲ್ಲಿ ಆರಂಭಗೊಂಡು, ಬೃಹದಾಕಾರವಾಗಿ ಇಂದು ಬೆಳೆದು ನಿಂತಿದೆ ಎಂದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಅವುಗಳ ಪೈಕ್ತಿ ಆನೇಕೆ ಹೋಂಸ್ಟೇ ಗುಣಮಟ್ಟ, ಮಲೆನಾಡಿನ ಕಲೆ, ಸಂಸ್ಕೃತಿ, ಊಟ, ವಸತಿ ಸೌಕರ್ಯವನ್ನು ಒದಗಿಸುವ ಮೂಲಕ ದೇಶ-ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿವೆ ಎಂದು ಹೇಳಿದರು.
ಮಳೆ ಬೀಳುವ ಮಳೆನಾಡಿನ ಹೆಚ್ಚು ಪರಿಸರಗಳಲ್ಲಿ ಹೋಂಸ್ಟೇ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಈ ಹೋಂಸ್ಟೇಗಳಿಗೆ ಹೋಗುವ ರಸ್ತೆ ಪರಿಸ್ಥಿತಿಗಳನ್ನು ಅಸೋಸಿಯೇಷನ್ ಪದಾಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದಲ್ಲಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಹೋಂಸ್ಟೇ ಅಭಿವೃದ್ಧಿ ಜೊತೆಗೆ ಪ್ರವಾಸಿಗರನ್ನು ಪ್ರಕೃತಿ, ಸಂಸ್ಕೃತಿ ಜೊತೆಗೆ ಸದಾಭಿರುಚಿಯನ್ನು ಬೆಳೆಸಲು ಆಕರ್ಷಿಸುವಂತೆ ಮಾಡಿದ್ದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಹೊಂದಲು ಸಾಧ್ಯ. ಪ್ರವಾಸಿಗರೂ ಕೂಡಾ ಜಿಲ್ಲೆಯ ಸೊಬಗನ್ನು ಅನುಭವಿಸಿದರೆ ಮಲೆನಾಡಿನ ಪರಿಸರ ಅರ್ಥವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಎನ್. ಆರ್. ತೇಜಸ್ವಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತಗೌಡ. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೌಂಟಿ ಗಣೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಪಿ.ಪ್ರವೀಣ್, ಕಾರ್ಯದರ್ಶಿ ಅನ್ಸರ್ ಜುವರ್, ಸಹ ಕಾರ್ಯದರ್ಶಿ ಎಂ.ಆರ್. ವರುಣ್ ಕುಮಾರ್, ನಿರ್ದೇಶಕ ಉತ್ತಮ ಗೌಡ, ಹೊಲದಗದ್ದೆ ಗಿರೀಶ್, ಅಕ್ಷತ್ ಪ್ರಸನ್ನ ಉಪಸ್ಥಿತರಿದ್ದರು.


