ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಶಿರಗುರ ಗ್ರಾಮದ ಬಳಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಸತತ 7 ಗಂಟೆಗಳ ಪ್ರಯತ್ನದ ಬಳಿಕ ಒಂಟಿ ಸಲಗ ಕೆಪಿ ಕಾಲರ್ – 2ಗೆ ಅರವಳಿಕೆ ನೀಡಿ ಅರಣ್ಯ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಸ್ವಲ್ಪ ದೂರು ಓಡಿ ಹೋಗಿ ಕಾಫಿ ತೋಟದೊಳಗೆ ಕಾಡಾನೆ ಮಲಗಿಕೊಂಡಿತ್ತು. ಸ್ಥಳಕ್ಕೆ ಕುಮ್ಕಿ ಆನೆಗಳ ತಂಡ ಆಗಮಿಸಿದ್ದು, ಹಗ್ಗಕಟ್ಟಿ ಅದನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯಿತು. ಕಾರ್ಯಾಚರಣೆಯಲ್ಲಿ 7 ಕುಮ್ಕಿ ಆನೆಗಳು ಹಾಗೂ 300 ಸಿಬ್ಬಂದಿ ಭಾಗಿಯಾಗಿದ್ದರು.
ಸ್ಥಳದಲ್ಲೇ ಇದ್ದ ಡಿಸಿ ಲತಾ ಕುಮಾರಿಯವರು ಸೆರೆ ಹಿಡಿದ ಕಾಡಾನೆ ಕುಮ್ಕಿ ಆನೆಗೆ ನಮಸ್ಕರಿಸಿದ್ದಾರೆ.
ಅರೇಹಳ್ಳಿ, ಬಿಕ್ಕೋಡು ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಈ ಕಾಡಾನೆ ಒಂಟಿಯಾಗಿ ಕಾಣಿಸಿಕೊಂಡು ಜನರ ಮೇಲೆ ಎರಗಿ ಬರುತ್ತಿತ್ತು. ಹಲವರ ಸಾವುಗಳಿಗೂ ಕಾರಣವಾಗಿದ್ದು ಇದೇ ಆನೆ ಎಂದು ಗುರುತಿಸಲಾಗಿತ್ತು. ಹಾಗಾಗಿ ಈ ಕಾಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಲು ಆದೇಶ ನೀಡಲಾಗಿತ್ತು.
ಕಾರ್ಯಚರಣೆಯಲ್ಲಿ ಸಾಕಾನೆಗಳಾದ ಮಹೇಂದ್ರ, ಅಜ್ಜಯ್ಯ, ಪ್ರಶಾಂತ್, ಧನಂಜಯ, ಏಕಲವ್ಯ, ಈಶ್ವರ, ಲಕ್ಷ್ಮಣ ಸೇರಿ ಏಳು ಆನೆಗಳು ಭಾಗಿಯಾಗಿದ್ದವು. ಬೆಳಗ್ಗೆಯಿಂದ ಕಾರ್ಯಾಚರಣೆ ತಂಡದ ಕಣ್ತಪ್ಪಿಸಿ ಕೆ.ಪಿ ಕಾಲರ್ ಓಡಾಡುತ್ತಿತ್ತು. ಕೊನೆಗೂ ಆನೆ ಸೆರೆಯಾಗಿದ್ದು ಸಿಬ್ಬಂದಿ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.


