ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ಆಲ್ದೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರಸ್ತೆ ಅಗಲೀಕರಣ ವಿಷಯ ಸಂಬಂಧ ಸಾರ್ವಜನಿಕ ಸಭೆ ಗುರುವಾರ ನಡೆಯಿತು.
ಸಭೆಯಲ್ಲಿ ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿಬಿ, ರಸ್ತೆ ಅಗಲೀಕರಣ ಬಹು ಮುಖ್ಯ ಮತ್ತು ಅನಿವಾರ್ಯವಾಗಿದ್ದು, ಎಲ್ಲರ ಸಹಕಾರ ಅತ್ಯಗತ್ಯ ಎಂದು ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ್ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಪಟ್ಟಣದ ಇಕ್ಕಲಗಳಲ್ಲಿ 45 ಅಡಿಗಳಷ್ಟು ಸ್ಥಳಾವಕಾಶ ಮಾಡಿಕೊಟ್ಟರೆ ಪಾರ್ಕಿಂಗ್ ಫುಟ್ಪಾತ್ ವ್ಯವಸ್ಥೆ ಸುವ್ಯವಸ್ಥಿತವಾಗಿ ನಿರ್ಮಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೆಲವು ಅಂಗಡಿ ಕಟ್ಟಡಗಳ ಮಾಲೀಕರು 35 ಅಡಿಗಳಷ್ಟು ಮಾಡಿ ಎಂದು ಮನವಿ ಮಾಡಿದರೆ ಸಾರ್ವಜನಿಕರು ಭವಿಷ್ಯದ ದೃಷ್ಟಿಯಿಂದ ರಸ್ತೆಯ ಇಕ್ಕೆಲಗಳಲ್ಲಿ 45 ಅಡಿಗಳಷ್ಟು ಅಗಲೀಕರಣ ಮಾಡುವುದು ಉತ್ತಮ ಎಂಬ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರ ಕುರಿತು ಮತ್ತೊಂದು ಸಭೆಯನ್ನು ಪಂಚಾಯಿತಿ ವತಿಯಿಂದ ಆಯೋಜಿಸುವಂತೆ ಸಲಹೆಗಳು ವ್ಯಕ್ತವಾದವು.
ಕಿರಿಯ ಸಹಾಯಕ ಎಂಜಿನಿಯರ್ ಮಹಮ್ಮದ್ ದಾವೂದ್ ಬೇಗ್, ಪಿಡಿಒ ಶಂಶೂನ್ ನಹರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಚ್ ಎಸ್,ಆಲ್ದೂರು ಹೋಬಳಿ ಅಧ್ಯಕ್ಷ ಪೂರ್ಣೇಶ್, ವಸ್ತಾರೆ ಘಟಕದ ಅಧ್ಯಕ್ಷ ಪೂರ್ಣೇಶ್ ದಿಣ್ಣೆಕೆರೆ,ಎಸ್ ಕೆ ಲಿಂಗೇಗೌಡ, ಮುಖಂಡರಾದ ನವರಾಜ್ ಎಚ್, ಗಣೇಶ್, ಹೆಚ್ಎಸ್ ಕೃಷ್ಣೆಗೌಡ, ಸಿ.ಸುರೇಶ್, ಹೆಡದಾಳು ಕುಮಾರ್, ಸಂಘ ಸಂಸ್ಥೆಗಳ ಮತ್ತು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


