ಮೂಡಿಗೆರೆ ಕಾಂಗ್ರೇಸ್ ಪಕ್ಷದೊಳಗಿನ ಜಟಾಪಟಿ ಇದೀಗ ಠಾಣೆಯ ಮೆಟ್ಟಿಲೇರುವ ಹಂತಕ್ಕೆ ತಲುಪಿದೆ.
ಕ್ಷೇತ್ರದಲ್ಲಿ ಶಾಸಕಿ ನಯನಾ ಮೋಟಮ್ಮ ಪರ ಹಾಗೂ ವಿರೋಧಿ ಬಣಗಳ ನಡುವಿನ ಭಿನ್ನಮತ ತಾರಕ್ಕಕ್ಕೇರಿದ್ದು, ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ.
ಇದುವರೆಗೆ ಸಭೆಗಳಿಗೆ, ಹೇಳಿಕೆ, ಪ್ರತಿಹೇಳಿಕೆಗಳ ಹಂತದಲ್ಲಿದ್ದ ಜಟಾಪಟಿ ಇದೀಗ ಠಾಣೆ ಮೆಟ್ಟಿಲೇರಿದೆ.
ಇತ್ತೀಚೆಗೆ ಗೋಣಿಬೀಡು ಗ್ರಾಮದಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ಬಣದಿಂದ ನಡೆದಿದ್ದ ಹೋಬಳಿ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಆಲ್ದೂರಿನ ದೀಪಕ್ ಎಂಬುವವರು ರೋಷಾವೇಶದಿಂದ ಮಾತನಾಡಿ ಶಾಸಕಿ ನಯನಾ ಮೋಟಮ್ಮ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಕಾರ್ಪೋರೇಟ್ ಶೈಲಿ ಕಛೇರಿ ಮಾಡಿರುವುದೇ ಭ್ರಷ್ಟಾಚಾರ ಮಾಡಲು ಎಂದೆಲ್ಲಾ ಆರೋಪಗಳನ್ನು ಮಾಡಿದ್ದರು.
ದೀಪಕ್ ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಮತ್ತು ಅವರು ದಲಿತ ಶಾಸಕಿಯನ್ನು ನಿಂದನೆ ಮಾಡಿದ್ದಾರೆ ಎಂದು ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಲ್ದೂರು ಕಾಂಗ್ರೇಸ್ ಮುಖಂಡ ಚೇತನ್ ಎಂಬುವವರು ಆಲ್ದೂರು ಠಾಣೆಗೆ ದೂರು ನೀಡಿದ್ದರು.
ತಮ್ಮ ಬಣದ ಮುಖಂಡನ ವಿರುದ್ಧ ಕೇಸು ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಯನಾ ಮೋಟಮ್ಮ ವಿರುದ್ಧ ಸಿಡಿದೆದ್ದಿರುವ ಬಣದ ದೊಡ್ಡ ಸಂಖ್ಯೆಯ ಮುಖಂಡರು ಮತ್ತು ಕಾರ್ಯಕರ್ತರು ಆಲ್ದೂರು ಠಾಣೆಗೆ ಆಗಮಿಸಿದ್ದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ನೇತೃತ್ವದಲ್ಲಿ ನೂರಕ್ಕೂ ಅಧಿಕ ಮುಖಂಡರು ಕಾರ್ಯಕರ್ತರು ಠಾಣೆಯ ಬಳಿ ಜಮಾಯಿಸಿದ್ದರು. ಹಾಗೆಯೇ ನಯನಾ ಮೋಟಮ್ಮ ಪರ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಠಾಣೆಯ ಬಳಿ ಸೇರಿದ್ದರು.
ಈ ಸಂದರ್ಭದಲ್ಲಿ ಕೆಲಹೊತ್ತು ಪರವಿರೋಧ ಗುಂಪುಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ದೀಪಕ್ ಅವರು ಶಾಸಕಿಯವರ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಸಾಬೀತುಪಡಿಸಿಬೇಕು. ದಾಖಲೆ ಬಿಡುಗಡೆ ಮಾಡಬೇಕು ಎಂದು ಶಾಸಕಿ ನಯನಾ ಮೋಟಮ್ಮ ಬೆಂಬಲಿಗ ಕಾರ್ಯಕರ್ತರು ಪಟ್ಟು ಹಿಡಿದರು. ಸುಳ್ಳು ಆರೋಪ ಮಾಡಿರುವ ದೀಪಕ್ ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು ಎಂದು ಒತ್ತಾಯಿಸಿದರು.
ನಂತರ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಅವರು ಎರಡೂ ಬಣಗಳ ಸಭೆ ನಡೆಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡುವ ಪ್ರಯತ್ನ ನಡೆಸಿದರು. ಸದ್ಯಕ್ಕೆ ಪ್ರಕರಣ ಬೂದಿಮುಚ್ಚಿದ ಕೆಂಡದಂತಿದ್ದು, ಮುಂದೆ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕು.


