ನಮ್ಮ ಜನಪದರ ಜ್ಞಾನಭಂಡಾರ ಅಪಾರವಾದುದಾಗಿತ್ತು. ತಮ್ಮ ಜೀವನ ಅನುಭವಗಳನ್ನು ಸಾಹಿತ್ಯ ಹಾಡುಗಳ ಮೂಲಕ ಅಭಿವ್ಯಕ್ತಿಗೊಳಿಸಿ ಅವುಗಳನ್ನು ಬಾಯಿಂದ ಬಾಯಿಗೆ ತಲೆಮಾರುಗಳಿಂದ ತಲೆಮಾರುಗಳಿಗೆ ತಲುಪಿಸಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಹೇಳಿದರು.
ಅವರು ಶನಿವಾರ ಸಂಜೆ ಮೂಡಿಗೆರೆ ತಾಲ್ಲೂಕು ಕುನ್ನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಾನಪದ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನದ ಭರಾಟೆಯಿಂದ ನಮ್ಮ ಜಾನಪದ ಬಡವಾಗುತ್ತಿದೆ. ಇಂದಿನ ಯುವಪೀಳಿಗೆ, ವಿದ್ಯಾರ್ಥಿಗಳಿಗೆ ನಮ್ಮ ಅಮೂಲ್ಯವಾದ ಜಾನಪದ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಸ್ವಲ್ಪವಾದರೂ ಆಸಕ್ತಿ ಮೂಡುವಂತೆ ಮಾಡುವ ನಿಟ್ಟನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕರ್ನಾಟಕ ಸಾಹಿತ್ಯ ಸಂಭ್ರಮ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಾಜು ; ತಲೆತಲಾಂತರದಿಂದ ನಮ್ಮ ಹಿರಿಯರು ತಮ್ಮ ಕೃಷಿ ಚಟುವಟಿಕೆ, ನಿತ್ಯದ ಕೆಲಸಗಳ ಸಂದರ್ಭದಲ್ಲಿ ಮನಸ್ಸಿನ ಉಲ್ಲಾಸಕ್ಕಾಗಿ, ಕೆಲಸದ ಆಯಾಸ ಕಳೆಯಲು ಹಾಡುಗಳನ್ನು ಕಟ್ಟಿ ಹಾಡಿದ್ದರು. ಆದರೆ ಇಂದಿನ ದಿನಮಾನಗಳಲ್ಲಿ ನಮ್ಮ ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದ ಭತ್ತದ ನಾಟಿ ಕಣ್ಮರೆಯಾಗುತ್ತಿದ್ದು, ಇದರೊಂದಿಗೆ ಶೋಭಾನೆ ಪದಗಳು, ನಾಟಿ ಪದಗಳು ಮೌನದ ಹಾದಿ ಹಿಡಿದಿವೆ. ನಮ್ಮ ಜಾನಪದ ಹಾಡು, ಕಥೆ, ಗಾದೆ, ಒಗಟುಗಳನ್ನು ಸಂಗ್ರಹಿಸುವ ಕೆಲಸವನ್ನು ಜಾನಪದ ಪರಿಷತ್ತು ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಕನ್ನಡಪರ ಹೋರಾಟಗಾರ ಹೊರಟ್ಟಿ ರಘು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಎ.ರವಿ ಕುನ್ನಹಳ್ಳಿ ವಹಿಸಿದ್ದರು. ವೇದಿಕೆಯಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ವಿಶ್ವ ಮಡಿಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಮಯೂರ್ ಹಾಲೂರು, ತಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಆರ್. ಗೋಪಾಲಗೌಡ, ಕೆ.ಆರ್. ಶಿವಾನಂದ, ಎಸ್.ಆರ್. ರವೀಂದ್ರನಾಥ, ಡಿ.ಕೆ.ಲಕ್ಷ್ಮಣಗೌಡ, ಸಿ.ಬಿ. ಶಂಕರ್, ಪ್ರಸನ್ನ ಗೌಡಹಳ್ಳಿ, ಕೆ.ಎಲ್. ಚಂದ್ರೇಗೌಡ, ಸುಚಿತ್ರ ಪ್ರಸನ್ನ, ರವಿ ಬಕ್ಕಿ, ನವೀನ್, ಸುಬ್ರಮಣ್ಯ ಹಾಲೂರು, ಹಸೇನಾರ್, ಕೃಷ್ಣೇಗೌಡ, ಶಾಂತಕುಮಾರ್, ಯೋಗೇಂದ್ರ ಮುಂತಾದವರು ಇದ್ದರು. ಶ್ರೀಮತಿ ದೀಪಿಕಾ ದೀಪಕ್ ಕಾರ್ಯಕ್ರಮ ನಿರೂಪಿಸಿದರು. ದಾಕ್ಷಾಯಿಣಿ ಪ್ರಾರ್ಥನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರನ್ನು ಆದರದಿಂದ ಗೌರವಿಸಲಾಯಿತು. ಜಾನಪದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


