ಕಾಫಿ ಡೇ ಮಾಲೀಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಸಂಪೂರ್ಣ ಜೀವನವನ್ನು ಕಾಫಿ ಬೆಳೆಗಾರರ ಮತ್ತು ಕಾರ್ಮಿಕರ ಹಿತಕ್ಕಾಗಿ ಸೆವಿಸಿದ್ದಾರೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಭಾನುವಾರ ಮೂಡಿಗೆರೆ ತಾಲೂಕಿನ ಸಿದ್ಧಾರ್ಥವನದಲ್ಲಿ ಸಿದ್ಧಾರ್ಥ ಹೆಗ್ಗಡೆ ಅವರ ಅಭಿಮಾನಿಗಳ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ವೇದಿಕೆ ಹಾಗೂ ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ನಿಂದ ಏರ್ಪಡಿಸಿದ್ದ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಗಡೆ ಅವರ ಜನ್ಮ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೇ ಸಿದ್ಧಾರ್ಥ ಹೆಗ್ಗಡೆ ಅಂದರೆ ತಪ್ಪಾಗಲಾರದು ಅವರ ಹೆಸರು ಶಾಶ್ವತವಾಗಿ ಉಳಿಯಲು ಜಿಲ್ಲೆಯ ಎಲ್ಲಾ ಕಡೆ ಸಿದ್ದಾರ್ಥ ಹೆಗ್ಗಡೆ ಅವರ ನೆನಪಿಗಾಗಿ ಹಲವು ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಮಾತನಾಡಿ, ಸಿದ್ಧಾರ್ಥ ಹೆಗ್ಗಡೆ ಅವರು ಪರಿಶ್ರಮದಿಂದ ಇಂದು ಕಾಫಿ ಬೆಳೆಗಾರರು ಆರ್ಥಿಕವಾಗಿ ಸಬಲರಾಗಲು ಕಾರಣರಾಗಿದ್ದಾರೆ. ಅಲ್ಲದೇ ಲಕ್ಷಾಂತರ ಮಂದಿ ಕಾರ್ಮಿಕರ ಬದುಕಿಗೆ ಆಸರೆಯಾಗಿದ್ದರು. ಅವರು ಮೃತರಾಗುವ ಮುನ್ನ ಇನ್ನೂ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಕೊಡುವ ಕನಸು ಹೊತ್ತಿದ್ದರು. ಆದರೆ ವಿಧಿಯಾಟದಿಂದ ಅವರನ್ನು ಕಳೆದುಕೊಳ್ಳುವಂತಾಯಿತು. ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ವಿದ್ಯಾನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಸಿದ್ಧಾರ್ಥ ಹೆಗ್ಗಡೆ ಅಭಿಮಾನಿಗಳ ಬಳಗದ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ ಮಾತನಾಡಿ, ಸಿದ್ಧಾರ್ಥ ಅವರ ಹೆಸರು ಬಳಸಿಕೊಂಡು ಯಾವುದೇ ವ್ಯಕ್ತಿ ಹಾಗೂ ಸಂಘಟನೆ ಹಣ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಬಾರದು. ಒಂದು ವೇಳೆ ಕಾರ್ಯಕ್ರಮ ಆಯೋಜಿಸಿದರೆ ಅವರ ಕುಟುಂಬದವರ ಗಮನಕ್ಕೆ ತರಬೇಕು. ವಯಕ್ತಿಕ ಲಾಭಕ್ಕೆ ಕುಟುಂಬದ ಗೌರವ, ಘನತೆಗೆ ದಕ್ಕೆ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಅಶೋಕ್ ಆಲ್ದೂರು, ಅಭಿಮಾನಿ ಬಳಗದ ಡಾ.ಜೆ.ಪಿ.ಕೃಷ್ಣೇಗೌಡ, ಕೃಷ್ಣೇಗೌಡ ಹವಳ್ಳಿ, ಪಿ.ಜಿ.ಅನುಕುಮಾರ್, ಜೆ.ಎಸ್.ರಘು, ಶಿವಪ್ರಕಾಶ್ ಮಾತನಾಡಿದರು.
ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ, ಕೆ. ಮಂಚೇಗೌಡ, ಎಂ.ಸಿ.ಹೂವಪ್ಪ, ಈರೇಗೌಡ, ವಿನಯ್ ಹಳೆಕೋಟೆ, ಶಿವಣ್ಣ ಬಿಳಗುಳ, ಪ್ರಶಾಂತ್ ಬಿಳಗುಳ, ಸುಗುಣ ಶಿವಪ್ರಸಾಧ್, ಮೋಹಿದ್ದೀನ್ ಸೇಟ್, ಪ್ರಶಾಂತ್, ಪೂರ್ಣೇಶ್ ಮೂರ್ತಿ, ಮದೀಶ್ ಮತ್ತಿತರರಿದ್ದರು.

ಈ ಸಂದರ್ಭದಲ್ಲಿ ಅನೇಕ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು


