ಮೂರು ವರ್ಷದ ಮಗು ಆಟವಾಡುತ್ತಾ ಟ್ರ್ಯಾಕ್ಟರ್ ಕೀ ಆನ್ ಮಾಡಿದ ಪರಿಣಾಮ ತಂದೆಯ ಮೇಲೆ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ಈ ದುರ್ಘಟನೆ ನಡೆದಿದೆ.
ಯಶ್ವಂತ್ (37) ಟ್ರಾಕ್ಟರ್ ಹರಿದು ಸಾವನ್ನಪ್ಪಿದ ವ್ಯಕ್ತಿ. ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಅವರು, ಅರಕಲಗೂಡು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಹೊಸ ಮನೆ ಕಟ್ಟಿಸುತ್ತಿದ್ದ ಯಶ್ವಂತ್, ಮನೆಯ ಆರ್ಸಿಸಿಗಾಗಿ ಟ್ರಾಕ್ಟರ್ನಲ್ಲಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತರಿಸಿದ್ದರು. ಈ ವೇಳೆ ಮಗುವನ್ನು ಆಟವಾಡಿಸುತ್ತಾ ಟ್ರ್ಯಾಕ್ಟರ್ ಮೇಲೆ ಕೂರಿಸಿದ್ದರು. ಮಗು ಆಟವಾಡುತ್ತ ಟ್ರ್ಯಾಕ್ಟರ್ ಕೀ ಆನ್ ಮಾಡಿದ್ದು, ಟ್ರ್ಯಾಕ್ಟರ್ ಏಕಾಏಕಿ ಮುಂದಕ್ಕೆ ಚಲಿಸಿದೆ.
ಮಗು ಕೆಳಗೆ ಬೀಳುತ್ತದೆ ಎಂದು ಗಾಬರಿಯಲ್ಲಿ, ರಕ್ಷಣೆಗೆ ಬಂದ ಯಶ್ವಂತ್ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.


