ಉತ್ತಮ ಆರೋಗ್ಯ ಹಾಗೂ ವಾತಾವರಣ ಸೃಷ್ಟಿಯಾಗಬೇಕೆಂದರೆ ರಾಸಾಯನಿಕ ಬಳಕೆ ಕಡಿಮೆ ಮಾಡಿ ಸಾಂಪ್ರದಾಯಕ ಮತ್ತು ನೈಸರ್ಗಿಕ ಬೆಳೆಗೆ ಒತ್ತು ಕೊಡಬೇಕೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ಕೆವಿಕೆ ಮೈದಾನದಲ್ಲಿ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ ಸೇರಿದಂತೆ ವಿವಿಧ ಸಂಶೊಧನ ಕೇಂದ್ರ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥಗಳ ಸಹಯೋಗದಲ್ಲಿ ಸುಸ್ಥಿರ ಜೀವನೋಪಾಯಕ್ಕೆ ಕೃಷಿ ನವೋದ್ಯಮ ಶೀರ್ಷಿಕೆಯಡಿ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕೆ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಅನ್ನ ಕೊಡುವ ರೈತ ಬದಲಾದ ಹವಾಮಾನದಿಂದ ತೊಂದರೆ ಅನುಭವಿಸುತ್ತಿದ್ದಾನೆ. ಅಕಾಲಿಕ ಮಳೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ರೈತರು ವಿಜ್ಞಾನಿಗಳ ಮಾರ್ಗದರ್ಶನ ಪಡೆದು ಸಾವಯವ ಕೃಷಿಗೆ ಒತ್ತುಕೊಡಬೇಕು. ರೈತ ಚನ್ನಾಗಿದ್ದರೆ ಮಾತ್ರ ದೇಶ ಉಳಿಯುತ್ತದೆ. ಹಾಗಾಗಿ ಸರಕಾರ ಕೃಷಿ ಪರವಾದ ಅನೇಕ ಯೋಜನೆ ಜಾರಿ ಮಾಡಿದೆ. ಬೆಳೆ ವಿಮೆ ನೀಡಲಾಗಿದೆ. ಒತ್ತುವರಿ ಕೃಷಿ ಭೂಮಿಯನ್ನು ಕನಿಷ್ಟ 30 ವರ್ಷ ಗುತ್ತಿಗೆ ಕೊಡುವ ನಿರ್ಧಾರ ಮಾಡಿದೆ. ಜತೆಗೆ ವಿಜ್ಞಾನಿಗಳು ಕೂಡ ರೈತರಿಗೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ. ಇವುಗಳನ್ನೆಲ್ಲಾ ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣವಾಗಬೇಕೆಂದು ಹೇಳಿದರು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕ ವಿ.ವಿ.ಯ ಕುಲಪತಿ ಡಾ.ಆರ್.ಸಿ.ಜಗದೀಶ್ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಬೆಳೆ ಬೆಳೆಯುವುದರ ಜತೆಗೆ ಮಾರುಕಟ್ಟೆವರೆಗೆ ಹೇಗೆ ಸಾಗಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ರೈತರು ಹೆಚ್ಚಾಗಿ ಏಕ ಬೆಳೆಗಳ ಬಗ್ಗೆ ಒಲವು ತೋರಬಾರದು. ತಮ್ಮ ಭೂಮಿಯ ಫಲವತ್ತತೆ ಬಗ್ಗೆ ವಿಜ್ಞಾನಿಗಳಲ್ಲಿ ಪರಿಶೀಲಿಸಿ ಮಿಶ್ರ ಬೆಳೆ ಬೆಳೆಯುವಲ್ಲಿ ಮುಂದಾಗಬೇಕು. ಅಲ್ಲದೇ ಪಾರಂಪಾರಿಕ ಬೆಳೆಗೆ ಯಾವುದೇ ಖರ್ಚು ಇಲ್ಲದೇ ಬೆಳೆಯಬಹುದು. ಅಂತಹ ಕೃಷಿ ಬಗ್ಗೆ ಚಿಂತನೆ ನಡೆಸಬೇಕು. ಮೊದಲು ಭೂಮಿ ಫಲವತ್ತತೆ ಕಂಡುಕೊಳ್ಳಬೇಕು. ಸಮಸ್ಯೆ ಇದ್ದರೆ ವಿಜ್ಞಾನಿಗಳ ಸಂಪರ್ಕ ಮಾಡಬೇಕು. ರೈತರು, ವಿಜ್ಞಾನಿ, ಉದ್ದಿಮೆಗಳ ಸಂಪರ್ಕದ ಮೂಲಕ ರೈತರು ತಮ್ಮ ಜೀವನ ಸುಸ್ಥಿರವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋ.ವಿವಿಯ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಜಿ.ವೆಂಕಟೇಶ್ ಅವರಿಂದ ಗೋಡಂಬಿ ಮತ್ತು ತೋಟದ ಬೆಳೆಗಳ ತಾಂತ್ರಿಕತೆ ಬಗ್ಗೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ್ ನಾರಾಯಣಪುರ ಅವರಿಂದ ನೈಸರ್ಗಿಕ ಕೃಷಿ ಬಗ್ಗೆ, ಕಿಸಾನ್ ಮೋರ್ಚದರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ದಿನೇಶ್ ದೇವವೃಂದ ಅವರಿಂದ ಸುಸ್ಥಿರ ಜೀವನೋಪಾಯಕ್ಕೆ ಕೃಷಿ ನವೋದ್ಯಮ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಚಂದ್ರಶೇಖರ್ ನಾರಾಯಣಪುರ, ಅಮರ್ ಡಿಸೋಜಾ, ಕೆ.ಎಸ್.ಕೃಷ್ಣೇಗೌಡ ಕುನ್ನಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿವಿಧ ಬೆಳೆಗಳ ಬಗ್ಗೆ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಾಯಿತು.
ಹಳೆಮೂಡಿಗೆರೆ ಗ್ರಾ.ಪಂ ಅಧ್ಯಕ್ಷ ಶಿವಾನಂದ್, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಳಸೆ ಶಿವಣ್ಣ, ಶಿವಮೊಗ್ಗದ ಕೃ.ತೋ.ವಿ.ವಿ.ಯ ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ.ವಾಲಿ. ವಿಸ್ತರಣಾ ನಿರ್ದೇಶಕ ಡಾ.ಹೇಮ್ಲಾ ನಾಯಕ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ್ ಎಸ್. ಮಾವರ್ಕರ್, ಕೆವಿಕೆ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ, ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಶಿವಪ್ರಸಾದ್, ಕೃಷಿ ಉದ್ದಿಮೆದಾರ ಬಿ.ಶಿವರಾಂ, ಕೋಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಎನ್.ವೆಂಕಟೇಶ್, ಡಾ. ಗಿರೀಶ್, ಪ್ರಗತಿಪರ ರೈತರಾದ ಪೂರ್ಣೇಶ್ ಜಿ.ಹೊಸಳ್ಳಿ, ಬಿ.ಶಿವರಾಂ, ತರುವೆ ಆದರ್ಶ ಮತ್ತಿತರರು ಉಪಸ್ಥಿತರಿದ್ದರು.



