ನಾಡಿನ ಹಿರಿಯ ಸಾಹಿತಿ ಸಾರಾ ಅಬೂಬಕರ್ ಅವರ ನಿಧನಕ್ಕೆ ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ.
ಅವರು ತಮ್ಮ ಸಂತಾಪ ಸೂಚನೆಯಲ್ಲಿ ಸಾರಾ ಅವರ ವ್ಯಕ್ತಿತ್ವ ಮತ್ತು ಬರಹವನ್ನು ಸ್ಮರಿಸಿದ್ದಾರೆ.
ಗಡಿನಾಡು ಕಾಸರಗೋಡಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಾರಾ ಮುಂದೆ ನಾಡಿನ ದೊಡ್ಡ ಲೇಖಕಿಯಾಗಿ, ಚಿಂತಕಿಯಾಗಿ ಗುರುತಿಸಿಕೊಂಡರು. ಅವರ ಲೇಖನಗಳಲ್ಲಿ ಸಂಪ್ರದಾಯ ವಿರೋಧ ಮನೋಭಾವನೆ ಎದ್ದು ಕಾಣುತ್ತಿತ್ತು. ಹೆಣ್ಣಿನ ಶೋಷಣೆಯ ವಿರುದ್ಧ ಅವರು ತಮ್ಮ ಬರಹಗಳ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಅವರು ಧರ್ಮದ ಕಟ್ಟುಪಾಡು ಮೀರಿ ಚಿಂತನೆ ನಡೆಸಿದರು. ಸಮಾಜದಲ್ಲಿ ಸಮಾನತೆ ಮೂಡಬೇಕು ಎಂದು ಹಂಬಲಿಸಿದ್ದರು.
ಅವರ ಮಾತೃಭಾಷೆ ಮಲೆಯಾಳಂ ಆಗಿದ್ದರೂ ಕನ್ನಡದ ಬಗ್ಗೆ ಅತೀವ ಪ್ರೀತಿ ಹೊಂದಿ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಿದರು.
ಅವರು 10 ಕಾದಂಬರಿಗಳು, 6 ಕಥಾಸಂಕಲನ, 5 ಭಾನುಲಿ ನಾಟಕಗಳು, ಅನೇಕ ಲೇಖನಗಳು, ಪ್ರವಾಸಕಥನಗಳನ್ನು ರಚಿಸಿದ್ದಾರೆ.
ಸಾರಾ ಅವರು ಅತ್ಯಂತ ಸರಳವಾದ ಜೀವನಕ್ರಮ, ಉನ್ನತವಾದ ಚಿಂತನೆಗಳಿಂದ ನಮಗೆಲ್ಲಾ ಮಾದರಿಯಾಗಿದ್ದರು.
ಅವರ ನಿಧನ ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ವಲಯಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದೆ ಎಂದು ಮೋಟಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.



